Friday, July 19, 2013

ವಿಷಕ್ಕೆ ಮನೆಮದ್ದು ಅಮೃತ

ಮಳೆಗಾಲ ಅಂದರೆ ಮೈ ಮನ ಮುದುಡಿ ಕೂರುತ್ತದೆ. ವಾತಾವರಣದಲ್ಲಾಗುವ ಬದಲಾವಣೆ ಒಂದಿಷ್ಟು ರೋಗಗಳನ್ನು ಹೊತ್ತು ತರುತ್ತದೆ. ಇದೇ ಮಳೆ ವಿಷಜಂತುಗಳ ಉಪಟಳ ಹೆಚ್ಚಿಸುತ್ತದೆ. ಒಮ್ಮೊಮ್ಮೆ ಇವು ಮನುಷ್ಯರನ್ನು ಅಪಾಯಕ್ಕೆ ಸಿಲುಕಿಸುತ್ತವೆ. ಮನೆಯೊಳಗೆ ನುಸುಳುವ ಇವು ಇದ್ದಕ್ಕಿದ್ದಂತೆ ಹಾಸಿಗೆ, ದಿಂಬು ಬೆಚ್ಚನೆ ಬಟ್ಟೆಗಳಲ್ಲಿ ಅಡಗಿ ಕುಳಿತು ಅರಿವಾಗದಂತೆ ತಮ್ಮ ಮೊನಚಾದ ಹಲ್ಲುಗಳನ್ನು ಬೆರಳ ತುದಿಗೋ ಇನ್ನೆಲ್ಲೋ ಊರಿಬಿಡುತ್ತವೆ. ಇದರಿಂದಾಗುವ ನೋವು ಸಹಿಸಲು ಅಸಾಧ್ಯ. ಅಷ್ಟೆ ಅಲ್ಲ , ವಿಷ ದೇಹದೊಳಗೆ ಸೇರಿ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ. ವಿಷಜಂತುಗಳ ಕಡಿತಕ್ಕೆ ಒಳಗಾದಾಗ ತಕ್ಷಣ ಚಿಕಿತ್ಸೆ ಪಡೆಯಬೇಕು. ವೈದ್ಯರ ತನಕ ಹೋಗುವ ಮೊದಲು ಮನೆಮದ್ದು ಟ್ರೈ ಮಾಡಿ. ಬಾಳೆ ದಿಂಡಿನ ರಸ ತೆಗೆದು ಇದರಿಂದ ಒಂದೊಂದು ಔನ್ಸಿ ನಷ್ಟು ರಸವನ್ನು 5 ನಿಮಿಷಗಳಿಗೊಮ್ಮೆ ಸೇವಿಸುತ್ತಿದ್ದರೆ ಹಾವಿನ ವಿಷ ಇಳಿಯುತ್ತದೆ. ಹಾವು ಕಚ್ಚಿದ ಭಾಗದಿಂದ ಸ್ವಲ್ಪ ರಕ್ತವನ್ನು ಹೊರಗೆ ತೆಗೆದು ಗಾಯವಾದ ಭಾಗದಲ್ಲಿ ಎಕ್ಕೆ ಗಿಡದ ಹಾಲನ್ನು ಎಡಬಿಡದೇ ಹಾಕುವುದರಿಂದ ಮತ್ತು ಎಳೆಯ ಎಲೆಗಳನ್ನು ತಿನ್ನುವುದರಿಂದ ವಿಷ ಮೇಲಕ್ಕೇರುವುದಿಲ್ಲ. ನೇರಳೆಗಿಡದ ಎರಡುಮೂರು ಎಲೆಗಳನ್ನು ನೀರಿನೊಡನೆ ಅರೆದು ರಸ ಸೇವಿಸುವುದರಿಂದ ಹಾವಿನ ವಿಷ ಇಳಿಯುತ್ತದೆ. ಮುತ್ತುಗದ ಬೇರಿನ ತೊಗಟೆಯನ್ನು ಕುಟ್ಟಿ ಅರೆದು ಶುಂಠಿಯ ಕಷಾಯದೊಡನೆ ಸೇವಿಸಬೇಕು. ಬೇರುಸಹಿತವಾಗಿ ಕಿರುಕಸಾಲೆ ಸೊಪ್ಪಿನ ಗಿಡವನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶೋಧಿಸಿ 15 ನಿಮಿಷಗಳಿಗೊಮ್ಮೆ 10-10 ಗ್ರಾಂ ನಂತೆ ಕುಡಿಸುತ್ತಿರುವುದರಿಂದ ಉಗ್ರ ಸರ್ಪದ ವಿಷವೂ ಶಾಂತವಾಗುತ್ತದೆಯಂತೆ. ಚೇಳು ಕಚ್ಚಿದಲ್ಲಿ 'ಗ್ರ್ಯಾಮಫೋನ್ ರೆಕಾರ್ಡ್'ನ ತುಂಡೊಂದನ್ನು ಕಲ್ಲಿನ ಮೇಲೆ ಸ್ವಲ್ಪ ಸೇರಿಸಿ ತೇದು ಗಾಯಕ್ಕೆ ಹಚ್ಚುವುದರಿಂದ ಗುಣವಾಗುತ್ತದೆ. ಹಸಿಯಾಗಿರುವ ಗರಿಕೆ ಹುಲ್ಲನ್ನು ತುಪ್ಪದೊಂದಿಗೆ ಅರೆದು ತಿಕ್ಕುವುದರಿಂದ ಚೇಳಿನ ವಿಷವು ಗುಣವಾಗುವುದು. ನಿಂಬೆರಸದಲ್ಲಿ ಉಪ್ಪು ಕಲಕಿ ಹಚ್ಚುವುದರಿಂದ ವಿಷವು ಕಮ್ಮಿಯಾಗುವುದು. ತುಳಸಿ ಎಲೆ ಅಥವಾ ವೀಳ್ಯದೆಲೆ ಮತ್ತು ಉಪ್ಪು ಸೇರಿಸಿ ಅರೆದು ಲೇಪಿಸಿದರೆ ಚೇಳು ಕಡಿತಕ್ಕೆ ಒಳ್ಳೆಯದು. ನವಸಾಗರ ಮತ್ತು ಸುಣ್ಣವನ್ನು ಕಲಸಿ ಮೂಗಿಗೆ ಮೂಸಿ ನೋಡುತ್ತಿದ್ದರೆ ಚೇಳಿನ ವಿಷ ತಕ್ಷಣಕ್ಕೆ ಇಳಿಯುತ್ತದೆ. ಪ್ರಿಯಾ. ಎಂ. ಭಟ್

No comments: