Tuesday, July 3, 2012

ಪಂಚಾಂಗ ಎಂದರೆ....

ಪಂಚಾಂಗ ಎಂದರೆ.... ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಮುಖ್ಯವಾಗಿ ಬೇಕಾದುದು ಪಂಚಾಂಗ. ಪಂಚ ಎಂದರೆ ಐದು. ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಈ ಐದು ಅಂಶಗಳನ್ನು ಒಳಗೊಂಡಿದ್ದೇ ಪಂಚಾಂಗ. ಮಾಸ, ಪಕ್ಷ, ಋತುಗಳು ಬದಲಾಗುತ್ತವಾದರೂ ಪ್ರತಿದಿನ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ಬದಲಾಗುವ ಈ ಐದು ಅಂಗಗಳೇ ಪಂಚಾಂಗಗಳು. ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ. ಯುಗಾದಿ ಹಬ್ಬದ ಮೊದಲ ದಿನ ಪಂಚಾಂಗವನ್ನು ಓದಿ ಆ ವರ್ಷದ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ. ಈ ಪದ್ಧತಿಗೆ 'ಪಂಚಾಂಗ ಶ್ರವಣ' ಎಂಬ ಹೆಸರಿದೆ. ಈ ಪಂಚಾಂಗದಲ್ಲಿ ತಿಥಿ, ವಾರ ಇತ್ಯಾದಿಗಳ ಜತೆಗೆ ಸಂವತ್ಸರ, ಅಯನ, ಮಾಸಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ ಇತ್ಯಾದಿಗಳೆಲ್ಲದರ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ ವಿವಾಹ, ಗೃಹಪ್ರವೇಶ, ನಾಮಕರಣ ಇತ್ಯಾದಿಗಳ ಮುಹೂರ್ತಗಳಿಗೆ ಬೇಕಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಈ ಪಂಚ ಅಂಗಗಳ ಮೊದಲಿನ ಅಕ್ಷರವನ್ನು ಮಾತ್ರ ಬರೆಯುವ ಮೂಲಕ ಸಂಕ್ಷಿಪ್ತವಾಗಿ ಸೂಚಿಸಲಾಗಿರುತ್ತದೆ. ಪಂಚಾಂಗವನ್ನು ತೆರೆಯುವ ಮುನ್ನ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಕೊಂಚ ತಿಳಿದಿರಬೇಕಾದುದು ಅವಶ್ಯ. ತಿಥಿ ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸತೊಡಗುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನವಾದ ಪಾಡ್ಯದಿಂದ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷ ಎಂದು ಕರೆಯುತ್ತಾರೆ. ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ಒಟ್ಟು ತಿಥಿಗಳು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ, ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ. ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥಿ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರುಗಳೂ ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲ ಎಂಬುದನ್ನು ಗಮನಿಸಬೇಕು. ವಾರ ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ. ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತವೆ. ನಕ್ಷತ್ರ ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಲಾಯಿತು. ಈ ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ, ಮೂಲ ಶಬ್ದಗಳು ನಪುಂಸಕ ಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗ. ಚಂದ್ರ ಪ್ರತಿದಿನವೂ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸುತ್ತಾನೆ. ಯೋಗ ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಕರಣ ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳು ಎನ್ನುತ್ತಾರೆ. ಕೊನೆಯ ನಾಲ್ಕು ಕರಣಗಳನ್ನು ಚರ ಕರಣಗಳೆಂದೂ ಜ್ಯೋತಿಷ್ಯ ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ನವಗ್ರಹಗಳು ದೊಡ್ಡನೆಬೆಟ್ಟು ಕೋಟೇಶ್ವರ ಈ ಭೂಮಿಯಲ್ಲಿ ವಾಸಿಸುವ ನಮ್ಮ ಮೇಲೆ ಸುತ್ತಲಿರುವ ಆಕಾಶಕಾಯಗಳು ವಿಶಿಷ್ಟ ಪರಿಪೂರ್ಣ ಬೀರುತ್ತವೆ. ಅಂತಹ ನವಗ್ರಹಗಳ ಹೆಸರು ನಿಮಗೆಲ್ಲ ಗೊತ್ತೇ ಇದೆ. ಆದರೆ ಅವುಗಳ ಸಂಪೂರ್ಣ ಪರಿಚಯ ಎಲ್ಲರಿಗೂ ಇರಲಾರದು. ಅವುಗಳ ಕಿರು ಪರಿಚಯವಿದು. ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವುಗಳೇ ಒಂಬತ್ತು ನವಗ್ರಹಗಳು. ಇವುಗಳಲ್ಲಿ ರಾಹು ಕೇತುಗಳಿಗೆ ಪ್ರಕಾಶವಿರುವುದಿಲ್ಲ. ಇವು ಕೇವಲ ಛಾಯಾಗ್ರಹಗಳು. ಬುಧ, ಗುರು, ಶುಕ್ರರು ಶುಭ ಗ್ರಹರು. ರವಿ, ಕುಜ, ಶನಿ, ರಾಹು, ಕೇತುಗಳು ಪಾಪ ಗ್ರಹರು. ಪೂರ್ಣಚಂದ್ರನಾದರೆ ಶುಭ, ಅದೇ ಚಂದ್ರ ಕ್ಷೀಣನಾದರೆ ಅಶುಭ ಫಲ ನೀಡುತ್ತಾನೆ. ಮೊದಲಿಗೆ ರವಿ. ಇವನ ದಿಕ್ಕು ಪೂರ್ವ. ಇವನಿಗೆ ಪ್ರಿಯವಾದ ಬಣ್ಣ ಕೆಂಪು. ಪ್ರಿಯವಾದ ರತ್ನ ಮಾಣಿಕ್ಯ. ಇವನ ದೇವತೆ ಶಿವ. ಪ್ರಿಯವಾದ ಧಾನ್ಯ ಗೋಧಿ. ಈತನ ದೆಶೆ ಆರು ವರ್ಷ. ರವಿಗೆ ಪ್ರಿಯವಾದ ಸಸ್ಯ ಎಕ್ಕ. ಎರಡನೆಯವನು ಚಂದ್ರ. ಇವನ ದಿಕ್ಕು ವಾಯವ್ಯ. ಪ್ರಿಯವಾದ ಬಣ್ಣ ಬಿಳಿ. ಇವನ ರತ್ನ ಮುತ್ತು. ಈತನ ದೇವತೆ ದುರ್ಗಾ ಮಾತೆ. ಈತನ ಪ್ರಿಯವಾದ ಧಾನ್ಯ ಅಕ್ಕಿ. ಇವನ ದೆಶೆ ಹತ್ತು ವರ್ಷ. ಚಂದ್ರನಿಗೆ ಪ್ರಿಯವಾದದ್ದು ಪಾಲಾಶ ವೃಕ್ಷ. ಮೂರನೆಯವನು ಕುಜ (ಮಂಗಳ). ದಿಕ್ಕು ದಕ್ಷಿಣ. ಪ್ರಿಯವಾದ ಧಾನ್ಯ ತೊಗರಿ. ಇವನ ದೇವತೆ ಸುಬ್ರಹ್ಮಣ್ಯ. ಪ್ರಿಯವಾದ ರತ್ನ ಹವಳ. ಪ್ರಿಯವಾದ ವಸ್ತ್ರ ಕೆಂಪು. ಇವನ ದೆಶೆ ಏಳು ವರ್ಷ. ಕುಜನಿಗೆ ಪ್ರಿಯವಾದದ್ದು ಖದಿರ. ಇನ್ನು ನಾಲ್ಕನೆಯವನು ಬುಧ. ಇವನ ದೇವತೆ ವಿಷ್ಣು. ದಿಕ್ಕು ಉತ್ತರ. ಧಾನ್ಯ ಹೆಸರುಕಾಳು. ಪ್ರಿಯವಾದ ರತ್ನ ಮರಕತ (ಪಚ್ಚೆ), ಇತನ ಪ್ರಿಯವಾದ ವಸ್ತ್ರ ಹಸಿರು. ಇವನ ದೆಶೆ ಹದಿನೇಳು ವರ್ಷವಾಗಿರುತ್ತದೆ. ಬುಧನಿಗೆ ಪ್ರಿಯವಾದದ್ದು ಉತ್ತರಣಿ. ಐದನೆಯವನೇ ಗುರು. ಈತನ ದೇವತೆ ಶಿವ. ದಿಕ್ಕು ಈಶಾನ್ಯ, ಪ್ರಿಯವಾದ ಧಾನ್ಯ ಕಡಲೆ. ಪ್ರಿಯವಾದ ರತ್ನ ಪುಷ್ಯರಾಗ. ವಸ್ತ್ರ ಹಳದಿ, ಇವನ ದೆಶೆ ಹದಿನಾರು ವರ್ಷ. ಗುರುವಿಗೆ ಪ್ರಿಯವಾದದ್ದು ಅಶ್ವತ್ಥ. ಆರನೆಯವನು ಶುಕ್ರ (ಭಾರ್ಗವ), ದಿಕ್ಕು ಆಗ್ನೇಯ. ಪ್ರಿಯ ದೇವತೆ ದುರ್ಗೆ, ಪ್ರಿಯವಾದ ಧಾನ್ಯ ಅವರೆ, ಪ್ರಿಯ ರತ್ನ ವಜ್ರ, ಬಣ್ಣ ಬಿಳಿ, ಇವನ ದೆಶೆ ಇಪ್ಪತ್ತು ವರ್ಷ. ಶುಕ್ರನಿಗೆ ಅತ್ತಿ ಮರ. ಏಳನೇಯವನು ಶನಿದೇವ, ಈತನ ದೇವತೆಗಳು ತ್ರಿಮೂರ್ತಿಗಳು, ಪ್ರಿಯ ದಿಕ್ಕು ಪಶ್ಚಿಮ, ಪ್ರಿಯ ಧಾನ್ಯ ಎಳ್ಳು, ಪ್ರಿಯ ರತ್ನ ನೀಲ, ಪ್ರಿಯ ವಸ್ತ್ರ ಕಪ್ಪು, ದೆಶೆ ೧೯ ವರ್ಷವಾಗಿದ್ದು, ಶಮಿ ಇವನಿಗೆ ಪ್ರಿಯವಾದ ವೃಕ್ಷ. ನವಗ್ರಹರಲ್ಲೇ ಪ್ರಬಲವಾದವನು ಶನಿ. ಎಂಟನೆಯ ಗ್ರಹ ರಾಹು, ಈತನ ದೇವತೆ ಸುಬ್ರಹ್ಮಣ್ಯ, ದಿಕ್ಕು ನೈರುತ್ಯ, ಧಾನ್ಯ ಉದ್ದು, ಪ್ರಿಯ ರತ್ನ ಗೋಮೇಧಿಕ, ವಸ್ತ್ರ ಬಣ್ಣ ಚಿತ್ರ ವಿಚಿತ್ರ, ದೆಶೆ ೧೮ ರಾಹುಗೆ ಗರಿಕೆ ಅತ್ಯಂತ ಪ್ರಿಯ. ಒಂಬತ್ತನೆಯವನೇ ಕೇತು, ಈತನ ದೇವತೆ ಗಣಪತಿ, ದಿಕ್ಕು ನೈರುತ್ಯ, ಧಾನ್ಯ ಹುರುಳಿ, ಪ್ರಿಯ ರತ್ನ ವೈಢೂರ್ಯ, ವಸ್ತ್ರ ಚಿತ್ರವಿಚಿತ್ರ, ದೆಶೆ ಏಳು ವರ್ಷ. ಕೇತುಗೆ ದರ್ಭೆ. ಯಾರಿಗೆ ಯಾರು ಮಿತ್ರರು? ರವಿಗೆ ಚಂದ್ರ, ಕುಜ, ಗುರು, ಕೇತು ಮಿತ್ರರು./ ಚಂದ್ರನ ಮಿತ್ರರು ರವಿ, ಕೇತು, ಬುಧ./ ಕುಜನಿಗೆ ರವಿ, ಚಂದ್ರ, ಗುರು, ಕೇತು ಮಿತ್ರರು./ ಬುಧನ ಮಿತ್ರರು ರವಿ, ಶುಕ್ರ, ರಾಹು. ಗುರುವಿಗೆ ರವಿ, ಚಂದ್ರ, ಕುಜ, ಕೇತು ಮಿತ್ರರು. / ಶುಕ್ರನ ಮಿತ್ರರು ಬುಧ, ಶನಿ, ರಾಹು. / ಶನಿಗೆ ಬುಧ, ಶುಕ್ರ, ರಾಹು ಮಿತ್ರರು. / ರಾಹುವಿನ ಮಿತ್ರರು ಬುಧ, ಶುಕ್ರ, ಶನಿ. ಕೇತುವಿಗೆ ರವಿ, ಚಂದ್ರ, ಕುಜ, ಗುರು ಮಿತ್ರರು. ಶತ್ರುಗಳು ರವಿಗೆ ಶುಕ್ರ, ಶನಿ, ರಾಹು ಶತ್ರುಗಳು. / ಚಂದ್ರನ ಶತ್ರು ರಾಹು. / ಕುಜನಿಗೆ ರಾಹು, ಬುಧ ಶತ್ರುಗಳು. / ಬುಧ ಶತ್ರು ಚಂದ್ರ. / ಗುರುವಿಗೆ ಬುಧ ಶುಕ್ರ ಶತ್ರುಶತ್ರುಗಳು. ಶುಕ್ರನ ಶತ್ರುಗಳು ರವಿ, ಚಂದ್ರ, ಕೇತು. / ಶನಿಗೆ ರವಿ, ಚಂದ್ರ, ಕುಜ, ಕೇತುಗಳು ಶತ್ರುಗಳು. / ರಾಹುವಿನ ಶತ್ರುಗಳು ರವಿ, ಚಂದ್ರ, ಕುಜ. / ಕೇತುವಿಗೆ ಶುಕ್ರ, ಶನಿ ಶತ್ರುಗಳು. ಇಂತಹ ನವಗ್ರಹಗಳು ತಮ್ಮ ಅವಧಿಯಲ್ಲಿ (ದಶಾ ವರ್ಷಗಳಲ್ಲಿ) ಮನುಷ್ಯನ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಆಯಾ ದೆಶೆಗಳಲ್ಲಿ ತಮ್ಮ ಜಾತಕ ಪರಿಶೀಲಿಸಿಕೊಂಡು ಸೂಕ್ತ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು.

No comments: