Tuesday, July 3, 2012

ಮೈ-ಮುಖದ ಅಂದಕ್ಕೆ ಮೃತ್ತಿಕಾ ಚಿಕಿತ್ಸೆ

ಮೈ-ಮುಖದ ಅಂದಕ್ಕೆ ಮೃತ್ತಿಕಾ ಚಿಕಿತ್ಸೆ ಶ್ರೀದೇವಿ ಅಂಬೆಕಲ್ಲು ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚಾಗಿ ನ್ಯಾಚುರೋಪತಿ ಟ್ರೀಟ್ಮೆಂಟ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರಾಕೃತಿಕವಾಗಿರುವ ಮಣ್ಣಿನಲ್ಲೂ ಔಷಧೀಯ ಅಂಶಗಳು ಇರುತ್ತವೆ ಎಂಬುದನ್ನು ನ್ಯಾಚುರೋಪತಿ ಸಾಬೀತು ಪಡಿಸಿದೆ. ಮಡ್ ಥೆರಫಿಗೆ ಅಥವಾ ಮೃತ್ತಿಕಾ ಚಿಕಿತ್ಸೆಗೆ ಆಯರ್ವೇದದಲ್ಲೂ ಮಹತ್ವದ ಸ್ಥಾನ. ಕಡಿಮೆ ಖರ್ಚಿನಲ್ಲಿ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಮೃತ್ತಿಕಾ ಚಿಕಿತ್ಸೆಯಲ್ಲಿ ಪ್ರಾಕೃತಿಕವಾಗಿ ದೊರೆಯುವ ಮಣ್ಣನ್ನು ಸಂಸ್ಕರಿಸಿ ಬಳಸಲಾಗುತ್ತದೆ. ಮುಖ್ಯವಾಗಿ ಕಪ್ಪು ಮಣ್ಣನ್ನು ಚರ್ಮರೋಗಗಳಿಗೆ, ಕೆಂಪು ಮಣ್ಣನ್ನು ಉದರ ಶೂಲೆ, ಗಂಟು ಬೇನೆಗೆ, ಹುತ್ತದ ಮಣ್ಣನ್ನು ಚರ್ಮ ರೋಗ ಗುಣ ಪಡಿಸಲು ಮತ್ತು ಬಿಳಿ ಮಣ್ಣನ್ನು ಯಕೃತ್ ತೊಂದರೆ ನಿವಾರಿಸಲು ಹಾಗೂ ಹಳದಿ ಮಣ್ಣನ್ನು ಪಚನ ಕ್ರಿಯೆ ತೊಂದರೆ ಮತ್ತು ಮಧುಮೇಹ ಸಮಸ್ಯೆ ಇರುವವರಿಗೆ ಬಳಸಲಾಗುತ್ತದೆ. ಮಡ್ಪ್ಯಾಕ್ ಕಣ್ಣಿನ ಮೇಲ್ಭಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳುವುದರಿಂದ ಕಣ್ಣುರಿ, ತುರಿಕೆ ಗ್ಲುಕೋಮಾ ಇರುವವರಿಗೂ ಒಳ್ಳೆಯದು. ಸೋಸಿ ಸಂಗ್ರಹಿಸಿಟ್ಟ ಹುತ್ತದ ಮಣ್ಣಿಗೆ ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಬರುವುದಿಲ್ಲ. ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಮೃತ್ತಿಕಾ ಸ್ನಾನ: ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಮಡ್ಥೆರಪಿ ನೀಡಲಾಗುತ್ತದೆ. ಮಣ್ಣಿನ ಲೇಪ ಹಚ್ಚಿದ ನಂತರ ಅದು ಒಣಗುವವರೆಗೆ ಸುಮಾರು 20ರಿಂದ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಮೈಯೊಡ್ಡಬೇಕು. ಈ ಚಿಕಿತ್ಸೆ ಚರ್ಮದ ಅಂಗಾಂಶಗಳು ಕ್ರಿಯಾಶೀಲವಾಗಿರುವಂತೆ, ರಕ್ತ ಸಂಚಾರ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಉಪಯೋಗಗಳು ಗಾಯ ಮತ್ತು ಚರ್ಮ ರೋಗಗಳಿಗೆ ಮಣ್ಣಿನಿಂದಲೇ ಬ್ಯಾಂಡೇಜ್ ಹಾಕಿಸಿಕೊಳ್ಳಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮಡ್ಬಾತ್ ಮಾಡಿಸುತ್ತಾರೆ. ಮಡ್ ಥೆರಪಿಯನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾತ್ರ ಅಲ್ಲ, ಬೆನ್ನು, ಸ್ನಾಯು ಜಾಯಿಂಟ್ ನೋವು , ಅಸ್ಥಿ ಸಂಧಿವಾತವನ್ನು ಕಡಿಮೆ ಮಾಡಿಕೊಳ್ಳಲು ಬಳಸುತ್ತಾರೆ. ಮಲಬದ್ಧತೆ, ತಲೆನೋವು, ರಕ್ತದೊತ್ತಡ, ಚರ್ಮರೋಗ ಸಮಸ್ಯೆಗೆ ಮಡ್ಬಾತ್ನಿಂದ ಪರಿಹಾರ ಕಂಡುಕೊಳ್ಳಬಹುದು. ಮಡ್ ಥೆರಪಿಯನ್ನು ನ್ಯಾಚುರೋಪತಿ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕ ವಸ್ತುವಾಗಿಯೂ ಬಳಸಲಾಗುತ್ತಿದೆ. ನುರಿತ ವೈದ್ಯರ ಸಲಹೆ ಪಡೆದು ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು. ಮಣ್ಣಿನ ಚಿಕಿತ್ಸೆಯ ಪ್ರಯೋಜನಗಳು: -ಮೃತ್ತಿಕಾ ಸ್ನಾನದಿಂದ ದೇಹ ರಿಫ್ರೆಶ್ ಆಗುತ್ತದೆ. -ಮಣ್ಣಿನ ಪ್ಯಾಕ್ ಹಾಕಿಸಿಕೊಂಡರೆ ತಣ್ಣೀರಿನ ಪ್ಯಾಕ್ ಹಾಕಿಸಿಕೊಳ್ಳುವದಕ್ಕಿಂತಲೂ ಹೆಚ್ಚಾಗಿ, ದೇಹದಲ್ಲಿ ನೀರಿನಂಶ ದೀರ್ಘ ಕಾಲ ಉಳಿಯುತ್ತದೆ. -ಚರ್ಮದ ಪಿಎಚ್ ಮೌಲ್ಯವನ್ನು ಸರಿಯಾಗಿರಿಸುತ್ತದೆ. -ದೇಹದಲ್ಲಿ ಸುಗಮ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ. -ಮಡ್ ಥೆರಪಿಯಿಂದ ಮೊಡವೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ. -ಚರ್ಮವನ್ನು ನುಣುಪಾಗಿರಿಸುತ್ತದೆ. -ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. -ಉರಿಯೂತವನ್ನು ತಡೆಯುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸತ್ತ ಚರ್ಮವನ್ನು ನಾಶ ಮಾಡಿ ಹೊಸ ಚರ್ಮ ಬೆಳೆಯುವುದಕ್ಕೆ ಸಹಕರಿಸುತ್ತದೆ. -ಕಜ್ಜಿ, ಸಣ್ಣ ಗುಳ್ಳೆಗಳಿಂದ ದೇಹದಲ್ಲಾದ ಕಲೆಗಳನ್ನು ಮಡ್ಥೆರಪಿಯಿಂದ ಬಹು ಬೇಗ ಕಡಿಮೆ ಮಾಡಿಕೊಳ್ಳಬಹುದು. -ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು. -ಸಾಮಾನ್ಯ ವೀಕ್ನೆಸ್, ನರ ದುರ್ಬಲತೆಯನ್ನು ಸರಿಪಡಿಸಲು ಮಡ್ ಥೆರಪಿ ಮಾಡುತ್ತಾರೆ. -ಅಜೀರ್ಣ ಆಗಿದ್ದರೆ ಹೊಟ್ಟೆಯ ಮೇಲ್ಭಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳಬಹುದು. ಸಣ್ಣ ಕರುಳಿನ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ವಿಪರೀತ ತಲೆನೋವಿಗೆ ತಲೆಗೆ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳಬಹುದು. ಇದರಿಂದ ನೋವು ಬಹುಬೇಗ ಶಮನಗೊಳ್ಳುತ್ತದೆ. ಮಣ್ಣನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಸರ್ವಾಂಗ ಲೇಪನ ಮತ್ತು ಸ್ಥಾನಿಕ ತೊಂದರೆಗಳಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಮೃತ್ತಿಕಾ ಮಣ್ಣು ಹಾಕಿಸಿಕೊಳ್ಳುವುದರಲ್ಲಿ ಕೂಡಎರಡು ವಿಧ. 1. ನೇರವಾಗಿ ಮಣ್ಣನ್ನು ಲೇಪಿಸುವುದು ಮತ್ತು 2. ಮಣ್ಣನ್ನು ಬಟ್ಟೆಯಲ್ಲಿ ಕಟ್ಟಿ ದೇಹದ ನಿರ್ದಿಷ್ಟ ಭಾಗದ ಮೇಲೆ ಕಟ್ಟುವುದು. ಹೇಗೆ ಚಿಕಿತ್ಸೆ? ರೋಗ ಲಕ್ಷಣಕ್ಕೆ ಅನುಗುಣವಾಗಿ ಮಣ್ಣು ದೊರೆಯುವ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಮೂರು ಅಡಿ ಆಳದಿಂದ ಮಣ್ಣನ್ನು ತೆಗೆದು ಶೇಖರಿಸಿದ ಮಣ್ಣಿನಿಂದ ಕಲ್ಲು, ಬೇರನ್ನು ಬೇರ್ಪಡಿಸಿ ಚೆನ್ನಾಗಿ ಪುಡಿ ಮಾಡಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಮಣ್ಣನ್ನು ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಮಣ್ಣಿನ ಲೇಪ ಹಾಕಿಕೊಂಡು 20-30 ನಿಮಿಷ ಕಾಲ ಒಣಗಲು ಹಾಗೆಯೇ ಬಿಡಬೇಕು. ಮೃತ್ತಿಕಾ ಚಿಕಿತ್ಸೆಯ 24 ತಾಸುಗಳ ಮೊದಲು; ಸಂಗ್ರಹಿಸಿದ ಮಣ್ಣನ್ನು ನೀರಿನಲ್ಲಿ ನೆನೆಸಿಡಬೇಕು. ಅದನ್ನು ನೇರವಾಗಿ ಬಳಸಬಹುದುದು ಅಥವಾ ಬಿಳಿ ಬಟ್ಟೆಯಲ್ಲಿ ಸುತ್ತಿ ದೇಹದ ಭಾಗಕ್ಕೆ ಹಚ್ಚಬಹುದು. ಇತ್ತೀಚಿನ ದಿನಗಳಲ್ಲಿ ಮೃತ್ತಿಕಾ ಚಿಕಿತ್ಸೆಯನ್ನು ಶಾರೀರಿಕ ತೊಂದರೆಗಳನ್ನು ನಿವಾರಿಸಲು ಮಾತ್ರವಲ್ಲದೆ, ಸೌಂದರ್ಯ ವರ್ಧಕವಾಗಿಯೂ ಬಳಸಲಾಗುತ್ತಿದೆ. - ಡಾ. ಜಯವಾಣಿ ಲೀಲಾಧರ್, ಸುಳ್ಯ. ಶ್ವೇತ ತ್ವಚೆ; ಬೆಳ್ಳಗಾಗಲು ಬವಣೆ ಏಕೆ? ಎದುರಿಗೆ ಹೇಳದಿದ್ದರೂ ಬೆನ್ನಹಿಂದೆ ಯಾರೋ 'ಅವಳು ಕಪ್ಪು' ಅಂತೆಲ್ಲ ಆಡಿಕೊಳ್ಳುವ ಮಾತು ಕಿವಿಗೆ ಬಿದ್ದಿದೆ. ಕೇವಲ ಬಣ್ಣದಿಂದಲೇ ವ್ಯಕ್ತಿತ್ವ ಅಳೆದು ಬಿಡುತ್ತಾರಲ್ಲ ಅಂತೆಲ್ಲ ಮನಸ್ಸು ಬೇಸರಿಸಿದೆ. ಆದರೂ ಅಂಥ ಮಾತುಗಳನ್ನು ನಿರ್ಲಕ್ಷಿಸಬೇಕು ಅಂದೆನಿಸುವುದಿಲ್ಲ. ಹೇಗಾದರೂ ಮಾಡಿ ಚರ್ಮದ ಬಣ್ಣ ಬೆಳ್ಳಗಾಗಲಿ ಅಂತ ಪರದಾಡಿಬಿಡುತ್ತಾಳೆ ಅವಳು. ಅವಳು ಅಂತಲ್ಲ , ಬೆಳ್ಳಗಿರೋದೇ ಸೌಂದರ್ಯ ಎಂದು ನಂಬೋ ಮಂದಿ ಆಗಷ್ಟೇ ಅಂಬೆಗಾಲಿಡುವ ಮಗುವನ್ನೂ ಬಿಡುವುದಿಲ್ಲ. ಬೆಳ್ಳಗಾಗಿಸಲಿಕ್ಕೆ ಹರಸಾಹಸ ಮಾಡುತ್ತಾರೆ. ಹಾಗಂತ ಕಂಡಕಂಡ ಔಷಧ ಅಥವಾ ಕ್ರೀಮ್ಗಳನ್ನು ತ್ವಚೆಗೆ ತಗುಲಿಸುವ ಅಗತ್ಯವಿಲ್ಲ. ದೇಹದ ವರ್ಣವನ್ನು ಸಂಪೂರ್ಣ ಬದಲಾಯಿಸುವುದೆಲ್ಲ ಸಾಧ್ಯವಿಲ್ಲ. ಆದರೂ ಅಂಥದ್ದೊಂದು ನಂಬಿಕೆ ಹಿಂದೆ ನೀವು ಬಿದ್ದಿದ್ದರೆ ರಾಸಾಯನಿಕಯುಕ್ತ ಕ್ರೀಮ್ಗಳನ್ನು ಬಳಸುವ ಬದಲು ಮನೆಯಲ್ಲೇ ಸಿಗಬಹುದಾದ ವಸ್ತುಗಳನ್ನು ಟ್ರೈ ಮಾಡಿ ನೋಡಿ. ಇದರಿಂದ ಚರ್ಮದ ಬಣ್ಣವೇ ಬದಲಾಗಿ ಹೋಗುವುದಿಲ್ಲ. ಆದರೆ ತಿಳಿವರ್ಣಕ್ಕೆ ಬರುತ್ತದೆ ಅನ್ನೋದು ನೆನಪಿರಲಿ. * ಬಾದಾಮಿ ಎಣ್ಣೆ ಯಿಂದ ಮಸಾಜ್ ಮಾಡಿ. * ನಿಂಬೆ ರಸ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ. * ಲಿಂಬೆರಸವನ್ನು ಚರ್ಮದ ಮೇಲೆ ಉಜ್ಜಿದರೆ ತ್ವಚೆ ಸ್ವಚ್ಛವಾಗುವುದರ ಜತೆ ತಿಳಿಬಣ್ಣಕ್ಕೆ ಬರುತ್ತದೆ. * ಆಲೂಗಡ್ಡೆಯನ್ನು ಬೇಯಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. * ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿದರೆ ಗುಲಾಬಿ ಬಣ್ಣ ನಿಮ್ಮದಾಗುತ್ತದೆ. * ಸೌತೆಕಾಯಿ ರಸದ ಜತೆ ಲಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚಿ. * ಪಪ್ಪಾಯಿ, ಹಾಲು ಹಾಗೂ ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆ ಹಚ್ಚಿ. * ಫೈನಾಪಲ್ ರಸವನ್ನು ಮುಖಕ್ಕೆ ಲೇಪಿಸಿಕೊಳ್ಳಿ.

No comments: