Tuesday, July 3, 2012

ಪುಷ್ಪಪೂಜೆಯ ಫಲ

ಪುಷ್ಪಪೂಜೆಯ ಫಲ - ಡಾ. ಎಸ್.ಎನ್. ಶೈಲೇಶ್ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ದೇವರಿಗೆ ಹೂ ಇಡುತ್ತಾರೆ. ಪೂಜೆ ಮಾಡುವಾಗ ದೇವರಿಗೆ ಹೂವಿಟ್ಟು ಪೂಜಿಸದಿದ್ದರೆ ಸಮಾಧಾನವಿರುವುದಿಲ್ಲ. ಅಷ್ಟೋತ್ತರದ ಸಮಯದಲ್ಲಿ ಬಿಡಿ ಹೂವು ಬೇಕಾಗುತ್ತದೆ. ಚೆನ್ನಾಗಿ ಅರಳಿದ ಹಾಗೂ ಸುವಾಸನೆ ಹೊಮ್ಮುವ ಹೂಗಳಿಂದ ಪೂಜೆ ಮಾಡಿದರೆ ನಮ್ಮ ಮನಸ್ಸಿಗೂ ಒಂದು ರೀತಿಯ ಉಲ್ಲಾಸ, ತೃಪ್ತಿ, ನೆಮ್ಮದಿ ಸಿಗುತ್ತದೆ. ಕೆಲವರ ಮನೆಯಲ್ಲಿ ದೇವರ ಫೋಟೋಗೆ ಪ್ಲಾಸ್ಟಿಕ್ ಹೂವಿನಿಂದ ಮಾಡಿದ ಹಾರವನ್ನು ಹಾಕಿರುತ್ತಾರೆ. ಇನ್ನು ಕೆಲವರ ಮನೆಯಲ್ಲಿ ನಿಜವಾದ ಹೂವಿನ ಹಾರವನ್ನು ಹಾಕಿ ಬಹಳ ದಿನಗಳವರೆಗೂ ತೆಗೆಯುವುದೇ ಇಲ್ಲ. ಇದರಿಂದ ಮನೆಯಲ್ಲಿ ಅಶಾಂತಿ, ದಾರಿದ್ರ್ಯ, ಚರ್ಮದ ಕಾಯಿಲೆ ಮುಂತಾದ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಸುವಾಸನೆ ಬೀರುವ ಹೂಗಳಾದರೂ ಪೂರ್ಣ ಅರಳದೆ ಇರುವ ಹೂಗಳಿಂದ ಪೂಜಿಸಿದರೆ ಮಕ್ಕಳ ಆರೋಗ್ಯದಲ್ಲಿ ತೊಂದರೆ ಹೆಚ್ಚಾಗುತ್ತದೆ. ಮೊಗ್ಗಿನಿಂದ ಪೂಜೆ ಮಾಡಿದರೆ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತದೆ. ಆದ್ದರಿಂದ ಪರಿಶುದ್ಧ ಹೂವಿನಿಂದ ಪೂಜೆ ಮಾಡುವುದೇ ಶುಭಕರವಾದುದು. ವಾರಕ್ಕೆ ಸಂಬಂಧಿಸಿದಂತೆ ಪೂಜಿಸುವ ಪುಷ್ಪಗಳು ೧. ಭಾನುವಾರ : ಕಣಗಿಲೆ, ತುಂಬೆ, ದಾಸವಾಳ ೨. ಸೋಮವಾರ : ಜಾಜಿ, ಮಲ್ಲಿಗೆ, ತುಂಬೆ ೩. ಮಂಗಳವಾರ : ಸೇವಂತಿಗೆ, ಕೇದಿಗೆ, ಗುಲಾಬಿ ೪. ಬುಧವಾರ : ಮಲ್ಲಿಗೆ, ಕೆಂಪು ತಾವರೆ ೫. ಗುರುವಾರ : ಸಂಪಿಗೆ, ಸೇವಂತಿಗೆ, ದಾಸವಾಳ ೬. ಶುಕ್ರವಾರ : ಸಂಪಿಗೆ, ತಾವರೆ, ಕನಕಾಂಬರ ೭. ಶನಿವಾರ : ಗುಲಾಬಿ. ಪೂಜಾಫಲ ಮಲ್ಲಿಗೆ : ಆರೋಗ್ಯಲಾಭ, ಕಾಯಿಲೆ ವಾಸಿಯಾಗುವುದು. ಸಂಪಿಗೆ : ಶತ್ರುಗಳ ಕಾಟದಿಂದ ಮುಕ್ತಿ.ತುಂಬೆ : ದೇವಿ ಆಶೀರ್ವಾದ, ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ನಂದಿಬಟ್ಟಲು: ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿ. ಕಣಗಿಲೆ : ಮಾಂತ್ರಿಕ ದೋಷ ನಿವಾರಣೆ. ಕೇದಿಗೆ : ಅಶಾಂತಿ, ಜಗಳದಿಂದ ಮುಕ್ತಿ, ಮನಸ್ತಾಪ ದೂರ. ಬಿಳಿ ಎಕ್ಕ : ಆರೋಗ್ಯ ಲಾಭ, ಕಾಯಿಲೆ ನಿವಾರಣೆ. ರುದ್ರಾಕ್ಷ : ದಾರಿದ್ರ್ಯ, ದುಃಖ ನಿವಾರಣೆ. ಸೂರ್ಯಕಾಂತಿ : ಕೆಲಸ ಕಾರ್ಯಗಳಲ್ಲಿ ಜಯ, ಐಶ್ವಯ, ಕೀರ್ತಿ ಲಭ್ಯ. ಪಾರಿಜಾತ : ಕಾಳಸರ್ಪ ದೋಷದಿಂದ ಮುಕ್ತಿ.ಮಾಧವಿ : ಜ್ಯೊತಿಷಿಗಳಿಗೆ, ವಾಕ್ ಸಿದ್ಧಿ ಇರುವವರಿಗೆ ಶುಭ. ಮಾಲತಿ : ಎಲ್ಲ ಪಾಪಗಳಿಂದ ದೂರ. ಅಗಸೆ : ಎಲ್ಲ ಪಾಪಗಳಿಂದ ದೂರ. ನೀಲಾಂಬರಿ : ಶನಿದೋಷ ನಿವಾರಣೆ. ಸುರಭಿ : ಕಾರ್ಯಸಿದ್ಧಿ. ಬಕುಲ : ಸ್ವಂತ ಮನೆ ಜಾಗ ಸಿದ್ಧ. ಕರವೀರ : ಸೃಜನಶೀಲ ವ್ಯಕ್ತಿಗಳಿಗೆ ಕಲ್ಪನಾ ಶಕ್ತಿ ಹೆಚ್ಚುತ್ತದೆ. ಅಶೋಕ : ದಾರಿದ್ರ್ಯ, ದುಃಖ ನಿವಾರಣೆ. ಲಕ್ಕಿ : ಸಾಂಸಾರಿಕ ಕಲಹ ನಿವಾರಣೆ. ಪಾದರಿ : ಪಿತೃದೋಷ ನಿವಾರಣೆ. ಕಲ್ಹಾರ : ಸರ್ವರಿಂದ ಆಕರ್ಷಣೆ.

No comments: