Monday, July 2, 2012

ತಲೆನೋವಿಗೆ ಮಾತ್ರೆ ಬಿಡಿ;

ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಕೊಡಿ ದಿನ ಬೆಳಗಾದ್ರೆ ಶನಿಯಂತೆ ಕಾಡೋದು ತಲೆನೋವು. ಹಾಗೆ ಬಂದು ಹೀಗೆ ಹೋಗುವ ತಲೆನೋವಿಗೆ ಕಂಡ ಕಂಡ ಮಾತ್ರೆ ತೆಗೆದುಕೊಳ್ಳುತ್ತೀರಿ. ಇವೆಲ್ಲ ಆರಂಭದಲ್ಲಿ ನೋವು ನಿವಾರಕವಾಗಿ ಕಂಡರೂ ಕೊನೆಗೆ ಅದೇ ಅಭ್ಯಾಸವಾಗಿ ಬಿಡುತ್ತದೆ. ಅದು ಇನ್ಯಾವುದೋ ಸಮಸ್ಯೆಯನ್ನು ತಂದಿಡಬಹುದು. ಅದರ ಬದಲು ಮನೆಮದ್ದಿನಿಂದಲೇ ತಲೆನೋವು ಓಡಿಸಿ. *ಒಂದು ವಾರ ನಿರಂತರವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಜತೆ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ. *ಕುದಿಯುವ ನೀರಿನಲ್ಲಿ ತಾಜಾ ಶುಂಠಿ ಅಥವಾ ಒಣ ಶುಂಠಿ ಪುಡಿಯನ್ನು ಸೇರಿಸಿ ಹಬೆ ತೆಗೆದುಕೊಳ್ಳಿ. *ನಿಂಬೆರಸವನ್ನು ಹಣೆಗೆ ಹಚ್ಚಿ. *ಶುಂಠಿಯನ್ನು ಜಜ್ಜಿ ಹಣೆಗೆ ಹಚ್ಚಿಕೊಳ್ಳಿ. *ಬಿಸಿ ನೀರು ತುಂಬಿದ ಒಂದು ಬಕೆಟ್ನಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷಗಳ ಕಾಲ ಇಳಿಬಿಡಬೇಕು. ಎರಡು ಮೂರು ವಾರಗಳ ಕಾಲ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. *ಬಿಸಿ ನೀರಿನಲ್ಲಿ ನೀಲಗಿರಿ ತೈಲದ 10 ಹನಿಗಳನ್ನು ಹಾಕಿ ಹಬೆ ತೆಗೆದುಕೊಳ್ಳಿ. *ಅರ್ಧ ಚಮಚ ದಾಲ್ಚಿನಿ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಹಣೆಗೆ ಹಚ್ಚಿಕೊಳ್ಳಿ. ಸೌಂದರ್ಯಕ್ಕೆ ಮೊಟ್ಟೆ ಮೊಟ್ಟೆ ತಿನ್ನುವುದರಿಂದ ಆರೋಗ್ಯ ವೃದ್ಧಿಸುತ್ತದೆ, ಶಕ್ತಿ ಹೆಚ್ಚುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾದರೆ, ಒಂದು ಮೊಟ್ಟೆ ಹೆಣ್ಣಿನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದು ಸೌಂದರ್ಯ ತಜ್ಞರ ಉವಾಚ.* ಒಂದು ಮೊಟ್ಟೆಗೆ ಒಂದೆರೆಡು ಚಮಚ ಜೇನುತುಪ್ಪ ಹಾಗೂ ಆಲಿವ್ ಆಯಿಲ್ ಸೇರಿಸಿ, ಮಿಶ್ರ ಮಾಡಿ. ಮುಖದಿಂದ ಕುತ್ತಿಗೆಯವರೆಗೂ ಲೇಪಿಸಿ. ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ನಿಸ್ತೇಜ ಚರ್ಮವನ್ನು ಟೋನ್ ಮಾಡುತ್ತದೆ. * ಒಂದು ಮೊಟ್ಟೆಗೆ ಕಡಲೆಹಿಟ್ಟು ಹಾಗೂ ಬಾಳೆಹಣ್ಣು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ೧೫ ನಿಮಿಷಗಳ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.* ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು, ಸ್ವಲ್ಪ ಓಟ್ಮಿಲ್ ಸೇರಿಸಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ . ಒಣಗಿದ ನಂತರ ತಣ್ಣಿರಿನಲ್ಲಿ ತೊಳೆಯಿರಿ. ಮುಖ ಕಾಂತಿಯುತವಾಗುತ್ತದೆ.* ಒಂದು ಮೊಟ್ಟೆಯ ಲೊಳೆಗೆ ಕೊಂಚ ಆಲಿವ್ ಎಣ್ಣೆ ಮಿಶ್ರ ಮಾಡಿ, ಕೊಂಚ ನೀರನ್ನು ಸೇರಿಸಿ ತಲೆಯ ಕೂದಲಿನ ಬುಡಕ್ಕೆ ಹಚ್ಚಿ. ಮಸಾಜ್ ಮಾಡಿ. ಒಂದೆರೆಡು ಗಂಟೆಯ ನಂತರ ತಲೆ ತೊಳೆಯಿರಿ. ಕೂದಲು ಮಿರ ಮಿರ ಮಿಂಚುವುದು. ಉದ್ದ ಕೂದಲು ಉಳಿಸಿಕೊಳ್ಳುವುದು ಹೇಗೆ? ಗಿಡ್ಡ ಕೂದಲವಳಿಗೆ ಉದ್ದವಾಗಿಲ್ಲ ಅನ್ನೋ ಚಿಂತೆ. ಉದ್ದ ಕೂದಲ ಹುಡುಗಿಗೆ ನಿರ್ವಹಣೆಯೇ ಕಷ್ಟವಂತೆ!ಆದ್ರೂ ಇತ್ತೀಚೆಗೆ ಹುಡುಗಿಯರು ಕೂದಲಿಗೆ ಸಿಕ್ಕಾಪಟ್ಟೆ ಕತ್ತರಿ ಹಾಕಲು ಮನಸ್ಸು ಮಾಡುತ್ತಿಲ್ಲ. ಉದ್ದ ಕೂದಲೇ ಫ್ಯಾಷನ್ ಅಂತಾರೆ. ಕೂದಲನ್ನು ಉದ್ದುದ್ದವಾಗಿ ಹಾಗೇ ಕೆಲವು ವರ್ಷ ಉಳಿಸಿಕೊಳ್ಳಬೇಕು ಅಂದರೆ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೇವಲ ಕೊಬ್ಬರಿ ಎಣ್ಣೆ ಹಚ್ಚಿ, ಸದಾ ಸಿಕ್ಕು ಬಿಡಿಸುತ್ತಿದ್ದಾಕ್ಷಣ ಕೂದಲು ಆರೋಗ್ಯವಾಗಿರುತ್ತದೆ ಅಂತೇನೂ ಅಲ್ಲ. ನೀವು ಸೇವಿಸುವ ಆಹಾರದ ಮೇಲೂ ಕೂದಲ ಬೆಳವಣಿಗೆ ಅವಲಂಬಿಸಿದೆ.ಹಸಿರು ತರಕಾರಿ, ಕಾಳುಗಳು, ಮೊಟ್ಟೆ, ಕ್ಯಾರೆಟ್ ಸೇವನೆ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಪ್ರತಿ ಆರೆಂಟು ವಾರಗಳಿಗೊಮ್ಮೆ ಕವಲೊಡೆದ ಕೂದಲ ತುದಿಯನ್ನು ಕತ್ತರಿಸಿ. ಇದರಿಂದ ಉಳಿದ ಕೂದಲು ಹಾನಿಗೀಡಾಗುವುದನ್ನು ತಪ್ಪಿಸಬಹುದು. *ಹೇರ್ ಡ್ರೈ ಮಾಡಬೇಡಿ. *ಒದ್ದೆ ಕೂದಲನ್ನು ಬಾಚಬೇಡಿ. *ಕಂಡಕಂಡ ಶಾಂಪೂ ಬಳಸಬೇಡಿ.*ಹಾನಿಕಾರಕ ರಾಸಾಯನಿಕ ಅಂಶವಿರುವ ವಸ್ತುಗಳ ಬಳಕೆ ಕೂದಲ ಆರೋಗ್ಯಕ್ಕೆ ಒಳ್ಳೆಯದಲ್ಲ.*ವಿಪರೀತ ಡಯಟ್ ಮಾಡಬೇಡಿ. ಏಕೆಂದರೆ ಇದರಿಂದ ಅಗತ್ಯ ಪೋಷಕಾಂಶ ನಿಮ್ಮ ಕೂದಲಿಗೆ ಸಿಗದೆ ಹೋಗಬಹುದು. ಹರೆಯದ ಗರ್ಭ ಭವಿಷ್ಯಕ್ಕೆ ಹೊರೆ ಶುಭಾ ವಿಕಾಸ್ ನೋಟಕ್ಕೆ ಬೆರಗಾದಳು ಹುಡುಗಿ. ಮಾತಿಗೆ ಮನಸೋತವಳು ಪ್ರೀತಿ ಪ್ರೇಮ ಅಂತೆಲ್ಲ ಓಡಾಡಿದಳು. ಆತನ ತೆಕ್ಕೆಯಲ್ಲಿ ಮೈಮನ ಮರೆತಳು. ಇಲ್ಲಿಯತನಕ ಕಂಡು ಕೇಳರಿಯದ ಖುಷಿ ಅನುಭವಿಸಿದಳು. ಜಗತ್ತಿನಲ್ಲಿ ಎಲ್ಲೂ ಸಿಗದ ಸುಖ ಆತನದ್ದೊಂದು ಮಾತು, ಸ್ಪರ್ಶದಲ್ಲಿ ಇದೆ ಅಂತಾನೆ ನಂಬಿದಳು. ಅದನ್ನೇ ಪದೇಪದೆ ನೆನೆದು ಪುಳುಕಗೊಳ್ಳುತ್ತಿದ್ದವಳನ್ನು ಭಯ ಬೀಳಿಸಿದ್ದು ತಿಂಗಳಿಗೆ ಬಾರದ ಮುಟ್ಟು.ಹತ್ತಾರು ದಿನ ಕಾದಾಗಲೂ ಅದು ಬರಲಿಲ್ಲ. ಬದಲಿಗೆ ದೇಹದಲ್ಲಾದ ಚಿಕ್ಕಪುಟ್ಟ ಬದಲಾವಣೆಗೆ ಮತ್ತಷ್ಟು ಕಂಗಾಲಾದಳು ಹುಡುಗಿ. ಇದು ಅವತ್ತಿನ ಪರಿಣಾಮ ಇರಬಹುದು ಎಂದು ಊಹಿಸುವಷ್ಟು ಜಾಣೆ. ಆದರೆ ಮೊದಲೇ ಎಚ್ಚರ ವಹಿಸಬೇಕು ಅನ್ನುವುದು ತಿಳಿಯಲಿಲ್ಲವಾ ಅಥವಾ ನಿರ್ಲಕ್ಷ್ಯವೋ ಅವಳಂತೂ ಇದೀಗ ತಿಂಗಳ ಗರ್ಭಿಣಿ. ವಯಸ್ಸಿನ್ನೂ ೧೫ ಮೀರಿಲ್ಲ!ಮದುವೆಗೆ ನಿಗದಿತ ವಯಸ್ಸು ಇದೆ. ಆದರೆ ಗರ್ಭಧಾರಣೆಗೆ ಋತುಚಕ್ರ ಆರಂಭವಾದರೆ ಸಾಕಷ್ಟೆ. ಅದು ವಯಸ್ಸು ಹನ್ನೆರಡೋ, ಹದಿನಾಲ್ಕೋ ಆಗಿರಬಹುದು. ಹಾಗಾಗಿಯೇ ಹರಯದಲ್ಲಿ ಗರ್ಭಧರಿಸುವ ಹಾಗೂ ಗರ್ಭಪಾತ ಪ್ರಮಾಣ ಹೆಚ್ಚುತ್ತಿದೆ. ಮುಚ್ಚಟೆಯಾಗಿ ನಡೆಯುವ ವ್ಯವಹಾರವಾದ್ದರಿಂದ ಇಂತಿಷ್ಟೆ ಅಂತ ಲೆಕ್ಕಚಾರ ಸಿಗುತ್ತಿಲ್ಲ. ಆದ್ರೆ ವೈದ್ಯ ಮೂಲದ ಪ್ರಕಾರ, ಹೈಸ್ಕೂಲ್ನಿಂದ ಪಿಯುಸಿಯವರೆಗಿನ ಹುಡುಗಿಯರು ಆಗಾಗ ಗರ್ಭಪಾತಕ್ಕೆ ವೈದ್ಯರ ಸಹಾಯ ಕೋರುತ್ತಾರೆ. ಅದರಲ್ಲಿ ಬಡವರು, ಶ್ರೀಮಂತರು ಅನ್ನುವ ಭೇದವಿಲ್ಲ. ಆದ್ರೆ ಬಹುತೇಕ ಪ್ರಕರಣಗಳು ಪೋಷಕರ ಗಮನಕ್ಕೆ ಬರುವುದೇ ಇಲ್ಲ. ಮಾನಸಿಕ ಸ್ಥಿತಿ ಇಷ್ಟಕ್ಕೆಲ್ಲ ಕಾರಣನಾದ ಹುಡುಗ ಸಂಬಂಧವೇ ಇಲ್ಲ ಅಂತ ಎದ್ದು ಹೋದರೆ ಅವಕಾಶ ಉಪಯೋಗಿಸಿಕೊಂಡ ಪ್ರೇಮಿಯ ಮೇಲೆ ಕೋಪ. ಮನೆಯಲ್ಲಿ ಗೌಪ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯದ ನಡುವೆ ಅವಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಆ ಕ್ಷಣಕ್ಕೆ ಆಗಬಾರದ್ದು ಆಗಿ ಹೋಗಿರಬಹುದು. ಆದು ಆಕಸ್ಮಿಕವೇ ಇರಬಹುದು, ಆದರೆ ಅದರ ಪರಿಣಾಮ ಮಾತ್ರ ಕೇವಲ ದೇಹದ ಮೇಲಾಗುವುದಿಲ್ಲ. ಮಾನಸಿಕವಾಗಿ ವಿಪರೀತ ಪರಿತಪಿಸುತ್ತಾರೆ. ಅದ್ಯಾವುದೋ ಘಳಿಗೆಯಲ್ಲಿ ತಪ್ಪು ನಡೆದು ಹೋಯಿತು ಅನ್ನೋ ಗಿಲ್ಟ್ ಜೀವನಪೂರ್ತಿ ಕಾಡುತ್ತದೆ. ಇದು ಒತ್ತಡ ಉಂಟು ಮಾಡಬಹುದು. ಓದಿನಲ್ಲಿ ಆಸಕ್ತಿ ಕಳೆದು ಹೋಗುವುದರ ಜತೆ ಆತ್ಮವಿಶ್ವಾಸದ ಕೊರತೆ ಜತೆ ವಿವಾಹದ ನಂತರವೂ ಲೈಂಗಿಕ ಸಂಗತಿ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಬಹುದು. ಮಹಾನಗರಗಳಲ್ಲಿ ಹೆಚ್ಚು ವಿದೇಶಗಳಲ್ಲಷ್ಟೆ ಅಲ್ಲ, ಭಾರತದಲ್ಲೂ ಹರಯದಲ್ಲಿ ಗರ್ಭ ಧರಿಸುವ ಪ್ರಮಾಣ ಹೆಚ್ಚಾಗಿಯೇ ಇದೆ. ಮಹಾನಗರಗಳಲ್ಲಿ ಇದರ ಪ್ರಮಾಣ ಅತ್ಯಧಿಕ. ೧೪ರಿಂದ ೧೯ ವರ್ಷದೊಳಗಿನ ಹುಡುಗಿಯರು ಹೆಚ್ಚು ಸ್ತ್ರೀರೋಗ ತಜ್ಞರನ್ನು ಭೇಟಿ ಆಗುತ್ತಾರೆ. ಪದೇಪದೆ ಗರ್ಭಪಾತದ ಪರಿಣಾಮ ಅಥವಾಜಾಗೃತಿ ಅದ್ಯಾವುದನ್ನೂ ಕೇಳಲಿಕ್ಕೆ ಇಷ್ಟ ಪಡದ ಹುಡುಗಿಯರಿಗೆ ಆ ಕ್ಷಣಕ್ಕೆ ಬೇಡದ ಮಗುವನ್ನು ತೆಗೆದುವುದಷ್ಟೆ ಬೇಕಿರುವುದು. ಕೆಲವರಂತೂ ವೈದ್ಯರ ಬಳಿ ಬರಲು ಹಿಂಜರಿಯುತ್ತಾರೆ. ಅವೈಜ್ಞಾನಿಕ ವಿಧಾನದ ಮೂಲಕ ಗರ್ಭಪಾತ ಮಾಡಿಸುವುದು ಸಾವಿಗೆ ಕಾರಣವಾಗಬಹುದು. ಯುನಿಸೆಫ್ ವರದಿ ಪ್ರಕಾರ, ಜಗತ್ತಿನಾದ್ಯಂತ ೧೫ರಿಂದ ೧೯ ವರ್ಷದೊಳಗಿನ ೭೦ ಸಾವಿರ ಹುಡುಗಿಯರು ಗರ್ಭಪಾತ, ಹೆರಿಗೆಗೆ ಸಂಬಂಧಪಟ್ಟ ಕಾರಣಗಳಿಂದ ಮರಣ ಹೊಂದುತ್ತಾರೆ. ಎಚ್ಚರಿಕೆಯೇ ಪರಿಹಾರ ಕೌಟುಂಬಿಕ ವಾತಾವರಣ, ಮಾಧ್ಯಮಗಳ ಪ್ರಭಾವ, ಲೈಂಗಿಕ ವಿಷ್ಯದ ಬಗ್ಗೆ ಅರೆಬರೆ ತಿಳುವಳಿಕೆಗಳೆಲ್ಲವೂ ವಯಸ್ಸಲ್ಲದ ವಯಸ್ಸಲ್ಲಿ ಎಡವಟ್ಟು ಮಾಡಿಕೊಳ್ಳಲು ಕಾರಣ. ಆದರೆ ಲೈಂಗಿಕ ಶಿಕ್ಷಣ ಕೊರತೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುವುದು ಕೆಲವು ಪ್ರಮಾಣದಲ್ಲಿ ಮಾತ್ರ ವಾಸ್ತವ. ಏಕೆಂದರೆ ಬಹುತೇಕ ಹರಯದವರಿಗೆ ಈ ಬಗ್ಗೆ ಜ್ಞಾನ ಇದ್ದೇ ಇರುತ್ತದೆ. ಗರ್ಭ ನಿರೋಧಗಳ ಬಗ್ಗೆ ಕೂಡ ಸಾಕಷ್ಟು ತಿಳಿವಳಿಕೆ ಇರುತ್ತದೆ. ಆದರೆ ಅವು ಕೈಕೊಟ್ಟಾಗ ಗರ್ಭಪಾತಕ್ಕೆ ವೈದ್ಯರನ್ನು ಸಂಪರ್ಕಿಸುತ್ತಾರೆ ಅಂತಾರೆ ಕೆಲವು ಸ್ತ್ರೀ ರೋಗ ತಜ್ಞರು. ಇದೇನು ಪರಿಹಾರವಿಲ್ಲದ ಸಮಸ್ಯೆಯಲ್ಲ. ಗರ್ಭಪಾತದ ನಂತರ ಎಲ್ಲವೂ ಮುಗಿದು ಹೋಗುತ್ತದೆ ಅಂತಲ್ಲ. ಮುಂದೊಂದು ದಿನ ತಾಯ್ತನ ಬಯಸಿದರೂ ಬಾರದೆ ಹೋಗಬಹುದು. ಇನ್ಯಾವುದೋ ಲೈಂಗಿಕ ಸಮಸ್ಯೆ ಕಾಡಬಹುದು. ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮುನ್ನ ಲೈಂಗಿಕ ಕ್ರಿಯೆ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀಳಬಹುದು ಅನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪೋಷಕರು ಮಕ್ಕಳ ಮೇಲೆ ಕಿಂಚಿತ್ತಾದರೂ ನಿಗಾ ವಹಿಸುವುದು ಒಳ್ಳೆಯದು. ತಪ್ಪು ನಡೆದು ಹೋದರೆ ಮತ್ತೆ ಮಾಡದಂತೆ ಬುದ್ಧಿ ಹೇಳಿ. ಅಪಾಯ ಜಾಸ್ತಿ ಹರಯದಲ್ಲಿ ಗರ್ಭ ಧಾರಣೆ ಭವಿಷ್ಯಕ್ಕೆ ಒಳ್ಳೆಯದಲ್ಲ. ಪದೇಪದೆ ಗರ್ಭಪಾತದಿಂದ ಗರ್ಭನಾಳ ಮುಚ್ಚಬಹುದು. ಸೋಂಕು ತಗುಲಬಹುದು. ಬಂಜೆತನ ಕೂಡ ಬರಬಹುದು. ಒಂದಕ್ಕಿಂತ ಹೆಚ್ಚು ವ್ಯಕ್ತಿಯೊಂದಗಿನ ಲೈಂಗಿಕ ಸಂಪರ್ಕದಿಂದ ಏಡ್ಸ್ ಮತ್ತಿತರ ಲೈಂಗಿಕ ರೋಗಗಳನ್ನು ಹರಡಬಹುದು. ಗರ್ಭಕೊರಳಿನ ಕ್ಯಾನ್ಸರ್ಗೆ ಕೂಡ ಕಾರಣವಾಗಬಹುದು. ಸುರಕ್ಷಿತ ಲೈಂಗಿಕ ಸಂಪರ್ಕದ ಜತೆ ಗರ್ಭ ನಿರೋಧಕಗಳ ಬಗ್ಗೆ ಅರಿತರೆ ಗರ್ಭಪಾತದಿಂದ ದೂರ ಇರಬಹುದು. -ಡಾ. ಕಾಮಿನಿ ರಾವ್, ಸ್ತ್ರೀರೋಗ ತಜ್ಞೆ ಹೀಗೆ ಮಾಡಬೇಡಿ ಹದಿಹರಯದ ಹೆಣ್ಣು ಮಕ್ಕಳಲ್ಲಿ ಫಲವತ್ತತೆ ಹೆಚ್ಚು. ಆದ್ದರಿಂದ ಬಹುಬೇಗ ಗರ್ಭ ಧರಿಸಬಹುದು. ಬೇಡದ ಗರ್ಭವನ್ನು ವೈದ್ಯರ ಸಲಹೆ ಇಲ್ಲದೆ ಮಾತ್ರೆ ಇನ್ನಿತರ ಔಷಧಗಳ ಮೂಲಕ ತೆಗೆದು ಹಾಕುವ ಪ್ರಯತ್ನ ಕೂಡ ಕೆಲವು ಸಲ ಫಲ ಕೊಡುವುದಿಲ್ಲ. ರಕ್ತಸ್ರಾವದಲ್ಲೇ ಎಲ್ಲವೂ ಮುಗಿದು ಹೋಯಿತು ಅಂದುಕೊಂಡರೆ ಅದು ತಪ್ಪು. ಭ್ರೂಣ ಉಳಿದು ಹೋಗಿ ಪುನಃ ಬೆಳೆದುಕೊಳ್ಳಬಹುದು ಅಥವಾ ಸೋಂಕು, ಗರ್ಭನಾಳ ಮುಚ್ಚುವಂಥ ಸಮಸ್ಯೆ ಕಾಡಗಬಹುದು. - ಡಾ. ಮಂಜುಳಾ, ಸ್ತ್ರೀರೋಗ ತಜ್ಞೆ ಕಣ್ಣಿಗೊಪ್ಪದು ಕಪ್ಪು ವರ್ತುಲ ಮುಖದ ಅಂದ ಹೆಚ್ಚಿಸುವಲ್ಲಿ ಕಣ್ಣು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅವೇ ಮುಖದಲ್ಲಿ ಎದ್ದು ಕಾಣುತ್ತವೆ. ಕಲೆಗೆ ಕಾರಣ ಖಿನ್ನತೆ, ನಿದ್ರಾಹೀನತೆ, ಒತ್ತಡ, ಪೋಷಕಾಂಶದ ಕೊರತೆ, ಅಸಮತೋಲಿತ ಡಯೆಟ್, ಸೂರ್ಯನ ಕಿರಣಗಳು ನೇರವಾಗಿ ಬೀಳುವುದು, ಅತಿಯಾದ ಮಾದಕ ವಸ್ತುಗಳ ಸೇವನೆ ಮೊದಲಾದವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ. ಇವುಗಳನ್ನು ಹೋಗಲಾಡಿಸಲು ಮನೆ ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು. *ಪ್ರತಿದಿನವೂ ಕನಿಷ್ಟ 6-8 ಗಂಟೆ ನಿದ್ದೆ ಮಾಡಿ. *ಸಾಕಷ್ಟು ನೀರು ಕುಡಿಯಿರಿ *ಒಂದು ಚಮಚ ಟೊಮ್ಯಾಟೋ ಜ್ಯೂಸ್, ಅರ್ಧ ಚಮಚ ನಿಂಬೆ ರಸ, ಸ್ವಲ್ಪ ಅರಿಸಿನ ಪುಡಿ, ಸ್ವಲ್ಪ ಕಡ್ಲೆ ಹಿಟ್ಟು ಬಳಸಿ ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೇ ಬಿಟ್ಟು, ತೊಳೆದುಕೊಳ್ಳಿ. *ಹತ್ತಿಯನ್ನು ಸೌತೆಕಾಯಿ ರಸದಲ್ಲಿ ಮುಳುಗಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಬಹುದು. * ಪುದೀನಾ, ನಿಂಬೆ, ಟೊಮ್ಯಾಟೋ ಜ್ಯೂಸ್ಗಳ ಕುಡಿಯುತ್ತಿರಿ. *ಹೊರಗಡೆ ಹೋಗುವಾಗ ಸನ್ಗ್ಲಾಸ್ ಬಳಸಿ. *ಅನಾನಸು ಮತ್ತು ಅರಿಸಿನ ಪುಡಿ ಮಿಶ್ರ ಮಾಡಿ ಹಚ್ಚಿಕೊಳ್ಳಿ. *ಕಣ್ಣಿನ ಸುತ್ತ ಮೂಡಿರುವ ಕಪ್ಪು ಕಲೆಗೆ ಪ್ರತಿದಿನ ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ. *ಪಪ್ಪಾಯಿ ಹಣ್ಣನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದಲೂ ಕಲೆ ಕಡಿಮೆಯಾಗುತ್ತದೆ.

No comments: