Tuesday, July 3, 2012
ಅಯನ, ಮಾಸ, ದಿನ
ಅಯನ, ಮಾಸ, ದಿನ * ಡಾ. ಎಸ್.ಎನ್. ಶೈಲೇಶ್
ಸಾಮಾನ್ಯವಾಗಿ ಎಲ್ಲರೂ ಆಯನಗಳು, ಮಾಸಗಳ ಬಗೆಗೆಲ್ಲ ಮಾತನಾಡುತ್ತಿರುತ್ತಾರೆ. ಇವು ಯಾವುವು ? ಯಾವಾಗ ಬರುತ್ತವೆ ಇತ್ಯಾದಿಗಳ ಕುರಿತ ವಿವರಣೆ ಇಲ್ಲಿದೆ.
ಆಯನಗಳು:
ಸೂರ್ಯನ ಸಂಚಾರವನ್ನು ಆಧರಿಸಿ ಏರ್ಪಡುವುದೇ ಆಯನಗಳು. ಇವುಗಳಲ್ಲಿ ಎರಡು ವಿಧ. ಉತ್ತರಾಯಣ ಹಾಗೂ ದಕ್ಷಿಣಾಯಣ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶವಾದ ದಿನವನ್ನು ಸಂಕ್ರಮಣ ಎಂದು ಕರೆಯುತ್ತಾರೆ. ಸೂರ್ಯನು ಮೇಷ ರಾಶಿಗೆ ಬಂದಾಗ ಮೇಷ ಸಂಕ್ರಮಣ ಎಂದು ಕರೆಯುತ್ತಾರೆ. ಹಾಗೆಯೇ ವೃಷಭ ರಾಶಿಗೆ ಬಂದಾಗ ವೃಷಭ ಸಂಕ್ರಮಣ, ಮಿಥುನಕ್ಕೆ ಬಂದಾಗ ಮಿಥುನ ಸಂಕ್ರಮಣ, ಮಕರ ರಾಶಿಗೆ ಬಂದಾಗ ಮಕರ ಸಂಕ್ರಮಣ ಎಂದು ಕರೆಯುತ್ತಾರೆ.
ಮಕರ ಸಂಕ್ರಮಣ ಬಂದ ದಿನಕ್ಕೆ 'ಮಕರ ಸಂಕ್ರಾಂತಿ' ಎಂದು ಕರೆಯುತ್ತಾರೆ. ಇಲ್ಲಿ ಸೂರ್ಯ ಸಂಕ್ರಮಣ ಬರುವ ಮುಂಚೆ ಹಾಗೂ ಎರಡು ದಿನ ಕಳೆದ ಮೇಲೆ ಶುಭ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಸೂರ್ಯನು ಮಕರ, ಕುಂಭ, ಮೀನ, ಮೇಷ, ವೃಷಭ, ಮಿಥುನ ರಾಶಿಗಳಲ್ಲಿ ಸಂಚರಿಸಿದಾಗ ಉತ್ತರಾಯಣ ಪುಣ್ಯಕಾಲ ಎಂದು ಕೂಡ ಕರೆಯುತ್ತಾರೆ. ಇನ್ನು ಸೂರ್ಯನು ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ಹಾಗೂ ಧನಸ್ಸು ರಾಶಿಗಳಲ್ಲಿ ಸಂಚರಿಸಿದಾಗ ದಕ್ಷಿಣಾಯಣ ಎಂದು ಕರೆಯುತ್ತಾರೆ.
ತಿಂಗಳುಗಳು :
ಇಂಗ್ಲಿಷ್ ತಿಂಗಳುಗಳು ಜನವರಿಯಿಂದ ಪ್ರಾರಂಭವಾಗುತ್ತವೆ. ಹಾಗೆಯೇ ನಮ್ಮ ಹಿಂದೂ ಮಾಸಗಳು ಪ್ರಾರಂಭವಾಗುವುದು ಚೈತ್ರ ಮಾಸದಿಂದ. ಚೈತ್ರ, ವೈಶಾಖ, ಜ್ಯೀಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಈ ಹನ್ನೆರಡು ನಮ್ಮ ಹಿಂದೂ ಮಾಸಗಳು.
ಪ್ರತಿ ತಿಂಗಳು ಯಾವ ದಿನ ಯಾವ ನಕ್ಷತ್ರಕ್ಕೆ ಹುಣ್ಣಿಮೆ ತಿಥಿ ಬರುತ್ತಿದೆಯೋ ಆ ನಕ್ಷತ್ರದ ಹೆಸರಿನಲ್ಲಿ ಆಯಾ ತಿಂಗಳುಗಳ ಹೆಸರುಗಳು ಬರುತ್ತದೆ. ಹುಣ್ಣಿಮೆಯ ದಿನ ಚಂದ್ರನು ಚಿತ್ತಾ ನಕ್ಷತ್ರದಲ್ಲಿ ಸಂಚರಿಸುವುದರಿಂದ ಮೊದಲ ತಿಂಗಳನ್ನು ಚೈತ್ರಮಾಸ ಎಂದು ಕರೆಯುತ್ತಾರೆ. ಅದೇ ತರಹ ವೈಶಾಖ ಮಾಸದಲ್ಲಿ ಹುಣ್ಣಿಮೆಯ ದಿನ ವಿಶಾಖ ನಕ್ಷತ್ರವಿರುತ್ತದೆ. ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನ ಜ್ಯೇಷ್ಠಾ ನಕ್ಷತ್ರದಲ್ಲಿ ಚಂದ್ರನಿರುತ್ತಾನೆ. ಚಂದ್ರನು ಆಷಾಢ ಮಾಸದ ಹುಣ್ಣಿಮೆಯ ದಿನ ಪೂರ್ವಾಷಾಢ ಅಥವಾ ಉತ್ತರಾಷಾಢ ನಕ್ಷತ್ರದಲ್ಲಿರುತ್ತಾನೆ. ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರದಲ್ಲಿ, ಭಾದ್ರಪದ ಮಾಸದಲ್ಲಿ ಪೂರ್ವಾಭಾದ್ರ ನಕ್ಷತ್ರದಲ್ಲಿ, ಅಶ್ವಯಜದಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಚರಿಸುತ್ತಿರುತ್ತಾನೆ. ಕೃತ್ತಿಕಾ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಕಾರ್ತಿಕ ಮಾಸ. ಮೃಗಶಿರ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಮಾರ್ಗಶಿರ ಮಾಸ. ಪುಷ್ಯ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಮಾರ್ಗಶಿರ, ಪುಷ್ಯ ನಕ್ಷತ್ರದಲ್ಲಿ ಹುಣ್ಣಿಮೆ ಬಂದರೆ ಪುಷ್ಯ, ಮಘಾ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಮಾಘಮಾಸ ಹಾಗೂ ಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಫಾಲ್ಗುಣ ಮಾಸವಾಗಿರುತ್ತದೆ.
ಚಂದ್ರನ ಸಂಚಾರದ ಆಧಾರದಿಂದ ಆಯಾ ತಿಂಗಳು ಖಚಿತವಾಗಿ ಏರ್ಪಟ್ಟಿತು. ಇನ್ನು ದಿನಗಳು ಏಳು. ಅಂದರೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ, ಈ ಏಳು ದಿನಗಳು ದೇವತೆಗಳಿಗೆ ಅನುಸಾರವಾಗಿ ಹೆಸರುಗಳನ್ನು ನೀಡಿದೆ ಎಂದು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ. ಆಯಾ ದಿನಕ್ಕೆ ಸಂಬಂಧಿಸಿದಂತೆ ಸೂರ್ಯೋದಯದ ಸಮಯದಲ್ಲಿ ಸೂರ್ಯನು ಇದ್ದುದರಿಂದ ಭಾನುವಾರ ಎಂದು ಕರೆಯಲಾಯಿತು. ಹೀಗೆ ಸೂರ್ಯೋದಯ ಸಮಯದಲ್ಲಿ ಚಂದ್ರನು ಇದ್ದುದರಿಂದ ಸೋಮವಾರವಾಯಿತು. ಹೀಗೆಯೇ ಅಂಗಾರಕ, ಬುಧ, ಗುರು, ಶುಕ್ರ ಹಾಗೂ ಶನಿ ಗ್ರಹಗಳು ಆಯಾ ದಿನದ ಸೂರ್ಯೋದಯದ ಸಮಯದಲ್ಲಿ ಇದ್ದ ಕಾರಣ ಆಯಾ ವಾರಗಳು ಎಂದು ಹೆಸರಿಸಲಾಯಿತು.
ಹಣಕಾಸಿನ ಯೋಗ ಯಾರಿಗೆ? ಹರಿಶ್ಚಂದ್ರ ಪಿ. ಸಾಲಿಯಾನ್
ಹಣ ಸಂಪಾದನೆಗೆ ನಾನಾ ದಾರಿಗಳಿವೆ. ಇದಕ್ಕೆ ಅವರವರ ಕುಂಡಲಿಯಲ್ಲಿರುವ ಗ್ರಹಗತಿಗಳೇ ಕಾರಣ. ಜನ್ಮಕುಂಡಲಿಯ ದ್ವಿತೀಯ ಭಾವದ ಮೂಲಕ; ಯಾವ ರೀತಿಯಿಂದ ಧನ ಸಂಪಾದನೆ ಮಾಡುತ್ತಾರೆ, ಯಾವ ರೀತಿ ಸಮಾಜದಲ್ಲಿ ಶ್ರೀಮಂತರಾಗುತ್ತಾರೆ ಎಂಬ ವಿಷಯವನ್ನು ತಿಳಿಯಬಹುದು.
ಬುಧ, ಶುಕ್ರ ಗ್ರಹಗಳು ಧನಸ್ಥಾನದಲ್ಲಿದ್ದರೆ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆಯ ಮೂಲಕ ಒಳ್ಳೆಯ ಸಂಪಾದನೆಯನ್ನು ಪಡೆಯುತ್ತಾರೆ. ಒಂಭತ್ತನೆ ಸ್ಥಾನದ ಅಧಿಪತಿ ರವಿಯು ಧನಸ್ಥಾನದಲ್ಲಿ ಕೂಡಿದರೆ ಇಂತಹವರಿಗೆ ಹಿರಿಯರ ಆಸ್ತಿ, ಧನ ಪ್ರಾಪ್ತಿಯಾಗುತ್ತದೆ. ಚಂದ್ರನು ಶುಭಗ್ರಹಗಳ ದೃಷ್ಟಿ, ಶುಕ್ರ ಶುಭಗ್ರಹಗಳೊಂದಿಗೆ ಧನಸ್ಥಾನದಲ್ಲಿ ಇದ್ದರೆ ಇವರಿಗೆ ತನ್ನ ತಾಯಿಯಿಂದ, ತಾಯಿಯ ಕಡೆಯಿಂದ ಹಣಕಾಸು ಸಿಗುತ್ತದೆ.
ಕರ್ಮಾಧಿಪತಿಯ ಜತೆಗೆ ಅಂಗಾರಕನು ಸೇರಿದ್ದರೆ ಇವರಿಗೆ ತನ್ನ ಒಡಹುಟ್ಟಿದ ಸಹೋದರರಿಂದ ಧನಪ್ರಾಪ್ತಿಯಾಗುತ್ತದೆ.ಪಂಚಮದ ಅಧಿಪತಿಯೊಂದಿಗೆ ಗುರುವು ಧನಸ್ಥಾನದಲ್ಲಿ ಇದ್ದರೆ ಇಂತಹವರಿಗೆ ತನ್ನ ಪುತ್ರರಿಂದ ಧನಲಾಭವಾಗುತ್ತದೆ. ಕರ್ಮಾಧಿಪತಿಯು ದ್ವಿತೀಯದಲ್ಲಿ ಶುಕ್ರನೊಂದಿಗಿದ್ದರೆ ತನ್ನ ಹೆಂಡತಿಯಿಂದ ಧನಲಾಭವಾಗುತ್ತದೆ. ಷಷ್ಟಮಾಧಿಪತಿಯು ರಾಹುವಿನೊಂದಿಗೆ ಧನಸ್ಥಾನದಲ್ಲಿ ಕೂಡಿದ್ದರೆ ಕಳ್ಳರಿಂದ, ಶತ್ರುಗಳಿಂದ ಧನಲಾಭ ಉಂಟಾಗುತ್ತದೆ.
ಲಗ್ನದಿಂದ ದ್ವಿತೀಯದಲ್ಲಿ ಬುಧನು ಪಾಪಗ್ರಹದೊಂದಿಗೆ ಇದ್ದು, ಇದಕ್ಕೆ ಚಂದ್ರನ ದೃಷ್ಟಿ ಇದ್ದರೆ ಇಂಥವರಿಗೆ ಹಣ ಸಂಪಾದಿಸಲು ಕಷ್ಟವಾಗುತ್ತದೆ. ರವಿಯು ಯಾವುದೇ ಪಾಪಗ್ರಹಗಳ ದೃಷ್ಟಿ ಇಲ್ಲದೆ ಧನಸ್ಥಾನದಲ್ಲಿ ಇದ್ದರೆ ಇವರಿಗೆ ಒಂದರ ಮೇಲೊಂದರಂತೆ ಬಹಳ ಸಂಪತ್ತು ಬರುತ್ತದೆ. ಧನಸ್ಥಾನದಲ್ಲಿ ಚಂದ್ರನಿಗೆ ಬುಧನ ದೃಷ್ಟಿ ಇದ್ದರೆ ಇಂತಹವರು ಸ್ವಪ್ರಯತ್ನದಿಂದ ಹಣವನ್ನು ಸಂಪಾದಿಸುತ್ತಾರೆ. ಲಗ್ನಾಧಿಪತಿಯು ದ್ವಿತೀಯದಲ್ಲಿ ಮತ್ತು ದ್ವಿತೀಯದ ಅಧಿಪತಿಯು ಏಕಾದಶದಲ್ಲಿ ಅಥವಾ ಏಕಾದಶದ ಅಧಿಪತಿಯು ಲಗ್ನದಲ್ಲಿದ್ದರೆ ಇವರು ಬಹಳ ಸಂಪತ್ತನ್ನು ಸಂಪಾದಿಸುತ್ತಾರೆ. ದ್ವಿತೀಯದ ಅಧಿಪತಿಯು ಉಚ್ಚವಾಗಿ ಕೇಂದ್ರಸ್ಥಾನವಾಗಿದ್ದರೆ ಲಗ್ನಾಧಿಪತಿಯು ಬಲಯುತನಾಗಿದ್ದರೆ ಮತ್ತು ದ್ವಿತೀಯಾಧಿಪತಿ ಇರುವ ಸ್ಥಾನದ ಅಧಿಪತಿ ಕೇಂದ್ರದಲ್ಲಿದ್ದರೆ ವ್ಯಕ್ತಿಯು ಸಂಪತ್ತು ಹೊಂದಿ ರಾಜಯೋಗವನ್ನು ಪಡೆಯುತ್ತಾನೆ.
ಗುರು, ಶುಕ್ರ ಅಥವಾ ಬುಧ ದ್ವಿತೀಯದಲ್ಲಿ ಉಚ್ಚನಾಗಿದ್ದರೆ ವ್ಯಕ್ತಿಯು ಧನಿಕನಾಗಿ ಹಲವರನ್ನು ಸಲಹುತ್ತಾನೆ. ದ್ವಿತೀಯದ ಅಧಿಪತಿಯು ತೃತೀಯಾಧಿಪತಿಯ ಸಂಗಡ ತೃತೀಯದಲ್ಲಿ ಇದ್ದರೆ ಇವರಿಗೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ. ದ್ವಿತೀಯದ ಅಧಿಪತಿಯು ಚತುರ್ಥದ ಅಧಿಪತಿಯ ಸಂಗಡ ಚತುರ್ಥದಲ್ಲಿದ್ದರೆ ಇವರು ಆಸ್ತಿ, ವಾಹನ, ಹಣಕಾಸಿನ ಅಭಿವೃದ್ಧಿಯನ್ನು ಹೊಂದುತ್ತಾರೆ.
Subscribe to:
Post Comments (Atom)
No comments:
Post a Comment