Tuesday, July 3, 2012

ಆರೋಗ್ಯಕ್ಕೆ ಹತ್ತು ಹವ್ಯಾಸಗಳು

ಆರೋಗ್ಯಕ್ಕೆ ಹತ್ತು ಹವ್ಯಾಸಗಳು ಪರಮೇಶ್ವರಯ್ಯ ಸೊಪ್ಪಿಮಠ ಕೆಲಸದ ಸ್ಥಳಕ್ಕೆ ನಡಿಗೆ ಕೆಲಸದ ಸ್ಥಳ ಹತ್ತಿರವಿದ್ದರೆ ನಡೆದುಕೊಂಡೇ ಹೋಗಬೇಕು. ವಾಹನದಲ್ಲಿ ಬಂದಿದ್ದರೆ ಕಚೇರಿಯಲ್ಲಿ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ. ಸರಿಯಾದ ರೀತಿಯಲ್ಲಿ ಆಲೋಚಿಸಿ, ತಾಳ್ಮೆ ಮತ್ತು ಬದ್ಧತೆಯಿಂದ ಸತತವಾಗಿ ದೇಹ ದಂಡಿಸಿದರೆ ಹೆಚ್ಚು ಸದೃಢರಾಗಿರಲು ಸಾಧ್ಯ. ಯಾವುದೇ ಕೆಲಸ ಮಾಡುವಾಗ ಒಂದೇ ಭಂಗಿಯಲ್ಲಿ ಇರಬಾರದು. ನಡು ನಡುವೆ ಏಳುವುದು, ಕುಳಿತುಕೊಳ್ಳುವುದು, ಓಡಾಡುವುದು ಅಗತ್ಯ. ದೇಹ ಪಳಗಿಸಿ ನಮ್ಮ ದೇಹದ ಮೇಲೆ ನಮಗೆ ಅಭಿಮಾನ, ಕಾಳಜಿ ಇರಬೇಕು. ವಾರಕ್ಕೆ ಕನಿಷ್ಠ ೧೫೦ನಿಮಿಷವಾದರೂ ವ್ಯಾಯಾಮ ಅಗತ್ಯ. ಎಲ್ಲರಿಗೂ ಒಂದೇ ರೀತಿಯ ವ್ಯಾಯಾಮ ಸರಿ ಹೊಂದುತ್ತದೆ ಎನ್ನಲಾಗದು. ಅವರವರ ದೇಹ ಪ್ರಕೃತಿಗೆ ತಕ್ಕಂತೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಡಿಗೆ ಮಾತ್ರ ಎಲ್ಲರಿಗೂ ಯೋಗ್ಯವಾಗಿರುವಂಥದ್ದು. ಕೈಲಿ ನೀರಿರಲಿ ನೀರಿನ ಬಾಟಲಿಯೊಂದು ಸದಾ ನಿಮ್ಮ ಕೈಲಿರಲಿ. ಅದು ಫ್ಯಾಷನ್ ಗಲ್ಲ. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿರುವುದು ಮುಖ್ಯ. ಸ್ವಲ್ಪ ಕಡಿಮೆಯಾದರೂ ನಿಶ್ಯಕ್ತಿ ಕಾಡುತ್ತದೆ, ಕೆಲಸಕ್ಕೆ ಸೂರ್ತಿ ಇಲ್ಲದಂತಾಗುತ್ತದೆ. ದೇಹದಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳುತ್ತವೆ. ಪ್ರತಿನಿತ್ಯ ಕನಿಷ್ಟ ಎಂದರೂ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು. ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರಿಟ್ಟು, ಮುಂಜಾನೆ ಅದನ್ನು ಕುಡಿವುದು ಹೆಚ್ಚು ಪ್ರಯೋಜನಕಾರಿ. ಸಂತೃಪ್ತ ನಿದ್ರೆ ಒತ್ತಡದ ಈ ದಿನಗಳಲ್ಲಿ ಅನೇಕರು ಕೆಲಸಕ್ಕಾಗಿ ನಿದ್ರೆ ತೊರೆಯುತ್ತಾರೆ. ಅದು ಒಳ್ಳೆಯದಲ್ಲ. ಉತ್ತಮ ನಿದ್ರೆ ಮಾಡಬೇಕು ಎಂಬುದನ್ನು ಎಲ್ಲ ಸಂಶೋಧನೆಗಳೂ ಬಲವಾಗಿ ಪ್ರತಿಪಾದಿಸಿವೆ. ಅರೆ ನಿದ್ರೆಯಾದರೆ ಅದರಿಂದಾಗುವ ಅನಾಹುತಗಳು ಬಹಳ. ದಿನದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ವೇಳಾಪಟ್ಟಿ ಸಿದಟಛಿಪಡಿಸಿಕೊಳ್ಳಿ. ಅದಕ್ಕೆ ತಕ್ಕನಾಗಿ ಕೆಲಸ ಸಾಗುತ್ತಿದ್ದರೆ ಸಂತೃಪ್ತ ನಿದ್ರೆಗೂ ಸಮಯ ಲಭಿಸುತ್ತದೆ. ಊಟ ಆರೋಗ್ಯಕರವಾಗಿರಲಿ ಕೆಲವರಿಗೆ ದಿನಕ್ಕೆ ನಾಲ್ಕಾರು ಬಾರಿ ಆಹಾರ ಸೇವಿಸುವ ರೂಢಿ ಇರುತ್ತದೆ. ಊಟದ ಬಗೆಗೂ ಸರಿಯಾದ ಯೋಜನೆ ರೂಪಿಸಿಕೊಳ್ಳಬೇಕು. ನಿಮ್ಮ ಜೀರ್ಣಶಕ್ತಿಗೆ ತಕ್ಕಂತೆ ಆಹಾರದ ಪ್ರಮಾಣ ನಿರ್ಧರಿಸಿಕೊಳ್ಳಿ. ಬೆಳಿಗ್ಗೆ ಸೇವಿಸುವ ಆಹಾರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಆ ದಿನದ ಚಟುವಟಿಕೆಗಳ ಮೇಲೂ ಇದು ಪ್ರಭಾವ ಬೀರುತ್ತದೆ. ಅಧ್ಯಯನಗಳ ಪ್ರಕಾರ ಬೆಳಗಿನ ತಿಂಡಿಯು ದೈಹಿಕ ಮತ್ತು ಮಾನಸಿಕವಾಗಿ ಪ್ರೇರಣೆ ನೀಡುತ್ತದೆ. ಹಾಗಾಗಿ ಸೇವಿಸುವ ಆಹಾರವು ಸಮತೋಲನದಿಂದ ಕೂಡಿರಲಿ. ಉಸಿರಾಟ ಕೂಡ ಒಂದು ಕಲೆ ಉಸಿರಾಟಕ್ಕೂ ಭಾವನೆಗಳಿಗೂ ನೇರ ಸಂಬಂಧವಿದೆ. ಉಸಿರಾಟವನ್ನು ಕಲೆಯನ್ನಾಗಿಸಿದರೆ ಭಾವನೆಗಳನ್ನು ನಿಯಂತ್ರಿಸಬಹುದು. ಸಿಟ್ಟುಗೊಂಡಾಗ, ಹೆದರಿದಾಗ ನಮ್ಮ ಉಸಿರಾಟ ವೇಗವಾಗುತ್ತದೆ. ಹೃದಯದ ಬಡಿತದ ಜತೆಗೆ ರಕ್ತ ಸಂಚಾರ ತೀವ್ರವಾಗುತ್ತದೆ. ಉಸಿರನ್ನು ನಿಯಂತ್ರಿಸುವುದರಿಂದ ಈ ಕ್ರಿಯೆಗಳನ್ನು ಹತೋಟಿಯಲ್ಲಿ ಇಡಬಹುದು. ವೇಗವಾಗಿ ಉಸಿರಾಡಿದಾಗ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಆಮ್ಲಜನಕ ಸಿಗುತ್ತದೆ. ಅದರಿಂದ ಮೆದುಳು ಮತ್ತು ದೇಹಕ್ಕೆ ಅಡಚಣೆ ಉಂಟಾಗುತ್ತದೆ. ಹಾಗಾಗಿ ಆಳ ಉಸಿರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಅದರಿಂದ ನಮ್ಮ ನಡವಳಿಕೆ ಬದಲಾಗಿ, ಮನಸ್ಸಿನ ತಳಮಳ ಕಡಿಮೆಯಾಗುತ್ತದೆ. ಪ್ರಾಣಾಯಾಮ ಮಾಡುವುದು ಹೆಚ್ಚು ಅನುಕೂಲ. ಮನ ತುಂಬಿ ನಗಬೇಕು ಯಾವಾಗಲೂ ಮುಖ ಗಂಟಿಕ್ಕಿಕೊಂಡು ಇದ್ದರೆ ಇತರರಿಗೆ ಮುಜುಗರ ತರುತ್ತದೆ. ಹಾಗೆಂದು ಒಳಗೊಳಗೇ ನಗುವುದೂ ತರವಲ್ಲ. ನಕ್ಕಾಗ ನಮ್ಮ ಮುಖದಲ್ಲಿನ ಸ್ನಾಯುಗಳಿಗೆ ಉತ್ತೇಜನ ಸಿಗುತ್ತದೆ. ನಗುವಿನ ಮುಖಾಂತರ ಎಂತಹವರನ್ನಾದರೂ ಆಕರ್ಷಿಸಬಹುದು. ಮುಕ್ತ ನಗು ಬಹಳ ಅನುಕೂಲ. ನಗುವನ್ನು ಇತರರೊಡನೆ ಹಂಚಿಕೊಂಡರೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಮನುಷ್ಯನ ವ್ಯಕ್ತಿತ್ವಕ್ಕೆ ನಗುವಿಗಿಂತ ಬೇರೆ ಅಲಂಕಾರ ಇಲ್ಲ. ಹಾಸ್ಯಪ್ರಜ್ಞೆ ರೂಢಿಸಿಕೊಂಡ ವ್ಯಕ್ತಿ ಯಾವ ಪ್ರದೇಶದಲ್ಲಾದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಾನೆ. ನಿತ್ಯ ಬದುಕಿನಲ್ಲಿ ಹಲವು ಹಾಸ್ಯ ಪ್ರಸಂಗಗಳು ಕಾಣುತ್ತವೆ. ಅವುಗಳನ್ನು ಗರುತಿಸುವ ಕಲೆ ಬೆಳೆಸಿಕೊಳ್ಳಬೇಕು. ಹಂಚಿಕೊಳ್ಳಬೇಕು. ಬೇಗ ಮಲಗಿ, ಬೇಗ ಏಳಿ ಹಣದ ಹಿಂದೆ ಓಡುತ್ತಿರುವುದರಿಂದ ಆರೋಗ್ಯದ ಬಗ್ಗೆ ಚಿಂತನೆ ನಡೆಸಲು ಅವಕಾಶ ಇಲ್ಲದಂತಾಗುತ್ತಿದೆ. ನಮ್ಮ ಹಿರಿಯರು 'ಬೇಗ ಮಲಗು, ಬೇಗ ಏಳು' ಎಂಬ ಸೂತ್ರ ನೀಡಿದ್ದಾರೆ. ಅದು ವೈಜ್ಞಾನಿಕವಾಗಿಯೂ ಸರಿಯಾಗಿರುವಂಥದ್ದು. ಬೆಳಗಿನ ಜಾವ ಸೂರ್ಯ ಉದಯಿಸುವ ಮುಂಚೆ ಪ್ರಕೃತಿ ಅತ್ಯಂತ ಶಾಂತವಾಗಿದ್ದು, ಹೆಚ್ಚು ಆಮ್ಲಜನಕ ನೀಡುತ್ತದೆ. ಅದನ್ನು ಸೇವಿಸುವುದರಿಂದ ಹೆಚ್ಚು ಕ್ರೀಯಾಶೀಲತೆ ಬರುತ್ತದೆ. ಆದರೆ ಇಂದು ನಾವು ರಾತ್ರಿ ಟಿವಿ ವೀಕ್ಷಿಸುತ್ತ ಅಥವಾ ಇನ್ನೇನೋ ಮಾಡುತ್ತ ರಾತ್ರಿ ತಡವಾಗಿ ಮಲಗುತ್ತೇವೆ. ಸೂರ್ಯ ನೆತ್ತಿಗೆ ಬಂದಾಗ ಏಳುತ್ತೇವೆ. ಇದು ನಾನಾ ಕಾಯಿಲೆಗಳಿಗೆ ಈಡು ಮಾಡುತ್ತದೆ. ಮನರಂಜನೆ ಬಳಲಿದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಅಗತ್ಯ. ಮನಸ್ಸು ತುಂಬಾ ದುಗುಡ, ಒತ್ತಡ, ಆತಂಕ, ನಿರುತ್ಸಾಹಗೊಂಡಾಗ ಇಷ್ಟವಾದ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪುಸ್ತಕ ಓದುವುದು, ಸಂಗೀತ, ಸಿನಿಮಾ ವೀಕ್ಷಣೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಮನರಂಜನೆ ಯಾವುದೇ ರೀತಿ ಇರಬಹುದು.ಆದರೆ ಅದು ಒತ್ತಡದ ಮನಸ್ಸಿಗೆ ಮುದ ನೀಡುವಂತಿರಬೇಕೇ ಹೊರತು ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಬಾರದು. ಮನರಂಜನೆ ಒಬ್ಬೊಬ್ಬರಲ್ಲೂ ಭಿನ್ನ. ಚಟಗಳಿಂದ ದೂರವಿರಿ ಅನೇಕರು ತಮ್ಮ ಮನಸ್ಸಿನ ಮೇಲೆ ಹತೋಟಿ ಕಳೆದುಕೊಂಡು ಮದ್ಯ, ಧೂಮಪಾನ, ಜೂಜು, ತಂಬಾಕು ಸೇವನೆಯಂಥ ಚಟಗಳಿಗೆ ದಾಸರಾಗುತ್ತಾರೆ. ಆರಂಭದಲ್ಲಿ ಅದು ಅಲ್ಪ ತೃಪ್ತಿ ನೀಡಬಹುದು. ನಂತರ ಅದರಿಂದಾಗುವ ಅನಾಹುತ ಲೆಕ್ಕವಿಲ್ಲದಷ್ಟು. ಬಿಡಬೇಕು ಎಂದರೂ ಹೊರಬರಲಾರದಂತಹ ಚಕ್ರವ್ಯೂಹದಲ್ಲಿ ಸಿಲುಕಿರುತ್ತಾರೆ. ಕೆಲವರಿಗಂತೂ ಚಟ ಕೂಡ ಫ್ಯಾಷನ್ ಎನಿಸಿಕೊಂಡುಬಿಟ್ಟಿದೆ. ವಾಸ್ತವವಾಗಿ ಅವುಗಳಿಂದ ಎಷ್ಟು ದೂರವಿರುತ್ತೀರೋ ಜೀವನ ಅಷ್ಟು ಸುಂದರವಾಗಿರುತ್ತದೆ. ಹಣ್ಣು ತಿಂದರೆ ಹತ್ತಿರವಿರದು ತೊಂದರೆ ಡಾ. ವೆಂಕಟ್ರಮಣ ಹೆಗಡೆ ಮಾನವನ ಶರೀರ ಒಂದು ಕಾರ್ಖಾನೆ ಇದ್ದಂತೆ. ಇಲ್ಲಿ ೨೪ ಗಂಟೆಗಳ ಕಾಲ ನಿರಂತರ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಸೇವಿಸಿದ ಆಹಾರವನ್ನು ಜೀರ್ಣ ಮಾಡುವುದು ಪ್ರಮುಖ ಕಾರ್ಯ. ದೇಹದಲ್ಲಿನ ಕ್ರಿಯೆಗಳಿಂದ ಪ್ರೀರ್ಯಾಡಿಕಲ್ಸ್ ಉತ್ಪತ್ತಿಯಾಗುತ್ತವೆ. ಇವು ಎಷ್ಟು ಹಾನಿಕಾರಕ ಗಳು ಎಂದರೆ, ಕ್ಯಾನ್ಸರ್ಗೂ ಕಾರಣವಾಗಿ ಬಿಡಬಲ್ಲವು. ಜೀವಕೋಶಗಳಿಗೆ ಹಾನಿ ಮಾಡಿ ವ್ಯಕ್ತಿಯ ಸಾವಿಗೂ ಕಾರಣ ವಾಗಬಹುದು. ಇಂಥ ಹತ್ತು ಸಾವಿರಕ್ಕೂ ಹೆಚ್ಚು ಪ್ರೀರ್ಯಾಡಿಕಲ್ ಗಳು ಪ್ರತಿದಿನ ನಮ್ಮ ಜೀವಕೋಶಗಳ ಮೇಲೆ ದಾಳಿ ಮಾಡುತ್ತಿರುತ್ತವೆ. ದುಷ್ಪರಿಣಾಮ * ಅಕಾಲ ಮುಪ್ಪು * ಪಾರ್ಕಿನ್ಸನ್ ಕಾಯಿಲೆ * ಕೀಲುಗಳ ನೋವು * ಮಲ್ಟಿಪಲ್ ಸ್ಕ್ಲಿರೋಸಿಸ್ * ಕ್ಯಾನ್ಸರ್ * ಹೃದಯ ಕಾಯಿಲೆ * ನರ ರೋಗಗಳು * ಆಲ್ಜಿಮರ್ಸ್ ಕಾಯಿಲೆ* ಕಣ್ಣಿನ ದೋಷಗಳು ಈ ದುಷ್ಪರಿಣಾಮಗಳನ್ನು ತಡೆಯುವ ಮತ್ತು ನಿಷ್ಕ್ರಿಯಗೊಳಿಸುವ ಶಕ್ತಿ ನಮ್ಮ ಪ್ರಕೃತಿ ಯಲ್ಲಿನ ಹಲವು ಪರಿಕರಗಳಿಗಿದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಆಂಟಿ ಆಕ್ಸಿಡೆಂಟ್ ಗಳು ಪ್ರೀರ್ಯಾಡಿಕಲ್ಗಳನ್ನು ನಿಷ್ಕ್ರಿಯಗೊಳಿಸಿ, ಆರೋಗ್ಯವನ್ನು ಕಾಪಾಡು ತ್ತವೆ. ಹಣ್ಣು, ತರಕಾರಿಗಳಲ್ಲಿ ಹೆಚ್ಚಾಗಿ ಆಂಟಿ ಆಕ್ಸಿಡೆಂಟ್ ಗಳಿವೆ. ಅದಕ್ಕೆ ಪೂರಕವಾಗಿ ಎ, ಸಿ ಮತ್ತು ಇ ಜೀವಸತ್ವಗಳಿರುವ ಆಹಾರ ಸೇವಿಸಿದರೆ ಹಲವು ಕಾಯಿಲೆಗಳಿಂದ ದೂರವಿರಬಹುದು. ಇ ಜೀವಸತ್ವದ ಪದಾರ್ಥ * ಸೂರ್ಯಕಾಂತಿ, ಕಸುಬೆ, ತಾಳೆ ಎಣ್ಣೆಗಳು * ಬಾದಾಮ್ * ದ್ವಿದಳ ಧಾನ್ಯಗಳು * ಬಟಾಣಿ * ತರಕಾರಿಗಳು ಸಿ ಜೀವಸತ್ವದ ಪದಾರ್ಥ ಕಿತ್ತಳೆ, ಮೊಳಕೆ ಕಾಳು, ಎಲೆಕೋಸು, ಟೊಮೆಟೊ, ಹೂಕೋಸು, ಮೂಸಂಬಿ, ಲಿಂಬೆ, ಸೀಬೆ, ಪಪ್ಪಾಯಿ, ಎ ಜೀವಸತ್ವದ ಪದಾರ್ಥ ಗಜ್ಜರಿ, ಬಸಳೆ, ಸಿಹಿ ಕುಂಬಳಕಾಯಿ, ಸೊಪ್ಪು, ಗೆಣಸು, ಕರಬೂಜ, ಎಲೆಕೋಸು

No comments: