Tuesday, July 3, 2012
ಮೂತ್ರಪಿಂಡ ಸಮಸ್ಯೆ:
ಮೂತ್ರಪಿಂಡ ಸಮಸ್ಯೆ: ಸೈಲೆಂಟ್ ಕಿಲ್ಲರ್
ಹೌದು, ಅದು ಸೈಲೆಂಟ್ ಕಿಲ್ಲರ್. ಈ ಹೆಸರು ಅದಕ್ಕೆ ತುಂಬ ಮ್ಯಾಚ್ ಆಗುತ್ತದೆ. ಯಾವುದೇ ಮುನ್ಸೂಚನೆ ಕೊಡದೇ ಅದು ಪ್ರಾಣಕ್ಕೆ ಎರವಾಗಬಲ್ಲದು. ಇನ್ನೂ ಆತಂಕವೆಂದರೆ, ಅದನ್ನು ಸಾಮಾನ್ಯರಿಂದ ಬಗೆಹರಿಸಿಕೊಳ್ಳಲು ಸಾಧ್ಯವೇ ಇಲ್ಲ ಮತ್ತು ಬಗೆಹರಿಸಿಕೊಳ್ಳುವುದು ಸುಲಭವೂ ಅಲ್ಲ. ಅರೆ, ಇದ್ಯಾವ ಕಿಲ್ಲರ್ ಎಂದು ಚಿಂತಿಸುತ್ತಿದ್ದೀರಾ? ಅದರ ಹೆಸರು ಕ್ರೋನಿಕ್ ಕಿಡ್ನಿ ಡಿಸೀಸ್(ಸಿಕೆಡಿ).
ಕ್ಯಾನ್ಸರ್ನಂತಹ ಕ್ಯಾನ್ಸರ್ ಅನ್ನು ಸಹ ಆರಂಭದ ಹಂತದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಗುರುತಿಸಲು ಸಾಧ್ಯ. ಆದರೆ, ಈ ತೊಂದರೆಯನ್ನು ಆರಂಭದ ಹಂತದಲ್ಲಿ ನಾವೇ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಹೃದ್ರೋಗ, ಮಧುಮೇಹದಂತಹ ಬೇರೆ ಯಾವುದೋ ತೊಂದರೆ ಇದ್ದರೆ ಇದೂ ಕಾಣಿಸಿಕೊಳ್ಳಬಹುದು ಎಂದು ಅಂದಾಜು ಮಾಡಬಹುದಷ್ಟೇ. ಯಾವಾಗಲೂ ಕೊನೆಯ ಹಂತದಲ್ಲಿ ಮಾತ್ರ ಈ ಕಿಡ್ನಿ ತೊಂದರೆ ಪತ್ತೆಯಾಗುತ್ತದೆ. ಆಗ ಯಾವ ವೈದ್ಯರು, ಯಾವ ಔಷಧಿಯೂ ಏನು ಮಾಡಲೂ ಸಾಧ್ಯವಿರುವುದಿಲ್ಲ. ಹೀಗಾಗಿ, ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸಾಲದು.
ನೀವು ಮಧುಮೇಹಿಗಳಾಗಿದ್ದರೆ, ಅಧಿಕ ರಕ್ತದೊತ್ತಡ ಹೊಂದಿದ್ದರೆ, ಕುಟುಂಬದಲ್ಲಿ ಯಾರಿಗಾದರೂ ಕ್ರೋನಿಕ್ ಕಿಡ್ನಿ ಡಿಸೀಸ್ ಹಿನ್ನೆಲೆಯಿದ್ದರೆ, 60 ವರ್ಷ ಮೇಲ್ಪಟ್ಟಿದ್ದರೆ, ಏಷ್ಯಾ ಮೂಲದವರಾಗಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ರಾಷ್ಟ್ರೀಯ ಕಿಡ್ನಿ ಫೌಂಡೇಷನ್ ಎಚ್ಚರಿಸುತ್ತದೆ. ಏಕೆಂದರೆ, ಈ ಮೇಲಿನ ಕೆಟಗರಿಗೆ ಸೇರಿದವರಲ್ಲಿ ಸಿಕೆಡಿ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ. ಒಂದು ಮೂಲದ ಪ್ರಕಾರ, ಅಮೆರಿಕದಲ್ಲಿ 29 ದಶಲಕ್ಷ ಕಿಡ್ನಿ ತೊಂದರೆ ಉಳ್ಳವರಾಗಿದ್ದಾರೆ, ದುರಂತವೆಂದರೆ, ಈ ಬಗ್ಗೆ ಅವರಿಗೆ ಅರಿವಿಲ್ಲ.
ಭಾರತದಲ್ಲಿಯೂ ಈ ಪ್ರಮಾಣ ಕಡಿಮೆಯೇನಿಲ್ಲ. ಲಕ್ಷಾಂತರ ಮಂದಿ ಪ್ರತಿನಿತ್ಯ ತುತ್ತಾಗುತ್ತಿದ್ದಾರೆ. ಆಗುತ್ತಾರೆ. ಇನ್ನೂ ವಿಶೇಷವೆಂದರೆ, ಅಮೆರಿಕ, ಆಫ್ರಿಕಾ, ಏಷ್ಯಾ ಹಾಗೂ ಫೆಸಿಪಿಕ್ ಪ್ರದೇಶದಲ್ಲಿ ವಾಸಿಸುವವರಿಗೆ ಇದರ ಪ್ರಮಾಣ ಹೆಚ್ಚು. ಏಕೆಂದರೆ, ಇವರಲ್ಲಿ ಮಧುಮೇಹವೂ ಅಧಿಕ.
ಮಧುಮೇಹಕ್ಕೆ ಜತೆ
'ಸಿಕೆಡಿ'ಗೆ ಮುಖ್ಯ ಕಾರಣವೆಂದರೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ. ಮಧುಮೇಹ ಕಿಡ್ನಿಯಲ್ಲಿರುವ ಫಿಲ್ಟರ್ ಮೇಲೆ ಹೆಚ್ಚು ಒತ್ತಡ ಹಾಕುತ್ತದೆ. ಕೆಲ ಕಾಲದ ಬಳಿಕ ಈ ಒತ್ತಡ ಕಿಡ್ನಿಯ ಕಾರ್ಯಕ್ಷಮತೆಯನ್ನು ವೀಕ್ ಮಾಡಬಲ್ಲದು, ಇದರಿಂದ ಕಿಡ್ನಿಯ ಫಿಲ್ಟರ್ಗೆ ತೊಂದರೆಯಾಗುತ್ತದೆ. ಆಗ ದೇಹದಲ್ಲಿನ ಪ್ರೊಟೀನ್ ಅಂಶ ಮೂತ್ರದಲ್ಲಿ ಸೋರಿಕೆಯಾಗಿಬಿಡುತ್ತದೆ. ಇದು ಒಂದು ಕಾರಣ.
ಇನ್ನು ಅಧಿಕ ರಕ್ತದೊತ್ತಡದಿಂದ ಸಹಜವಾಗಿ ಕಿಡ್ನಿಯ ಮೇಲೆ ಪರಿಣಾಮವುಂಟಾಗುತ್ತದೆ. ಇಡೀ ದೇಹದ ರಕ್ತನಾಳಗಳ ಮೇಲೆ ಹೈಪರ್ಟೆನ್ಷನ್ ಪರಿಣಾಮ ಬೀರುವಾಗ ಕಿಡ್ನಿ ಒಂದು ಇದರಿಂದ ಹೊರತಾಗಲು ಸಾಧ್ಯವೇ ಇಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಔಷಧ ದೊರೆತರೆ ಮಾತ್ರ ಸ್ವಲ್ಪ ಪರವಾಗಿಲ್ಲ.
ಸಾಮಾನ್ಯ ಲಕ್ಷಣಗಳು
ಕ್ರಾನಿಕ್ ಕಿಡ್ನಿ ಡಿಸೀಸ್ ಸೈಲೆಂಟ್ ಕಿಲ್ಲರ್ ಎಂದು ಕುಖ್ಯಾತಿ ಪಡೆದಿದ್ದರೂ ಕೆಲವು ಸಾಮಾನ್ಯ ಲಕ್ಷಣಗಳನ್ನು ತೋರಿಸುತ್ತದೆ. ಕಾರ್ಡಿಯೋವಾಸ್ಕ್ಯುಲರ್ ತೊಂದರೆ ಅಥವಾ ಬೇರ್ಯಾವುದೋ ಸಮಸ್ಯೆಯನ್ನು ತಂದೊಡ್ಡುವ ಜತೆಗೆ ಕಿಡ್ನಿ ಫೇಲ್ ಕೂಡ ಇದರಿಂದ ಆಗಬಹುದು. ಇಂತಹ ಯಾವುದೇ ತೊಂದರೆಗಳು ಕಂಡುಬಂದಲ್ಲಿ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ವೈದ್ಯರು.
* ನಿತ್ರಾಣ, ಸ್ಮರಣ ಶಕ್ತಿಯ ನಾಶ * ಯಾವ ಕೆಲಸಕ್ಕೂ ಉತ್ಸಾಹವಿಲ್ಲದಿರುವುದು * ನಿದ್ದೆ ಮಾಡಲು ಕಷ್ಟಪಡುವುದು * ಒಣಗಿದ ಚರ್ಮ
* ಪಾದಗಳು ಬಾಯುವುದು * ಕಣ್ಣುಗಳ ಸುತ್ತ ಊದಿಕೊಂಡಿರುವುದು, ಅದೂ ಸಹ ಮುಂಜಾನೆಯ ವೇಳೆಯಲ್ಲಿ
* ರಾತ್ರಿಯ ವೇಳೆ ಪದೇ ಪದೇ ಮೂತ್ರಕ್ಕೆ ಹೋಗಬೇಕೆಂದು ಅನಿಸುವುದು * ತೂಕ ಹೆಚ್ಚುವುದು ಅಥವಾ ಕಡಿಮೆಯಾಗುವುದು
ವಾಕರಿಕೆ ಅದು ಬರಿ ಕನವರಿಕೆ-ಇದು ಫಾಲ್ಸ್ ಪ್ರೆಗ್ನೆನ್ಸಿ * ಶುಭಾ ವಿಕಾಸ್
ತಿಂಗಳು ಕಳೆದರೂ ಮುಟ್ಟು ಸಮೀಪಿಸಲಿಲ್ಲ. ಹಾಗಂತ ಕಿಂಚಿತ್ತೂ ಚಿಂತೆಯ ಗೆರೆ ಅವಳ ಹಣೆಯ ಮೇಲೆ ಕಾಣಿಸುವುದಿಲ್ಲ.
ಸೋತು ಹೋಗಿದ್ದ ಮುಖದಲ್ಲಿ ಹೊಸ ಕಳೆ, ಮಾತಿನಲ್ಲಿ ಮುಗಿಯದ ಕನಸು. ಬಹುಶಃ ಅದೇ ಇರಬೇಕು ಅಂದುಕೊಂಡಿದ್ದಾಳೆ ಅವಳು.
ಬಯಸಿ ಬಯಸಿ ಪಡೆದ ಬಸಿರು ಇದು. ಇನ್ನೇನಿದ್ದರೂ ಒಡಲೊಳಗಿರುವ ಮಗುವನ್ನು ಜೋಪಾನ ಮಾಡುವ ಕೆಲಸ ಅಂದುಕೊಳ್ಳುತ್ತಾಳೆ. ಮುಟ್ಟು ನಿಂತು ಹದಿನೈದು ದಿನ ಕಳೆದಿಲ್ಲ. ಇವಳಿಗೆ ವಾಕರಿಕೆ. ಕಂಡಕಂಡಿದ್ದು ತಿನ್ನುವ ಬಯಕೆ. ವಿಪರೀತ ಸುಸ್ತು. ಬಸಿರು ಅಂದರೆ ಹೀಗೆ ಇರಬೇಕು ಅಂತೆಲ್ಲ ಸಂಭ್ರಮಿಸಿ ಬಿಡುತ್ತಾಳೆ.
ಒಂದೆರಡು ತಿಂಗಳು ಹಾಗೆ ಕಳೆದು ಬಿಡುತ್ತಾಳೆ. ಅನಂತರ ಆಸ್ಪತ್ರೆಗೆ ಹೋದವಳಿಗೆ ತಪಾಸಣೆ ನಡೆಸಿದ ವೈದ್ಯರ ಮಾತಿನ ಮೇಲೆ ನಂಬಿಕೆ ಇಲ್ಲ. ಮುಟ್ಟು ಬರುವ ಮಾತ್ರೆ ಕೊಟ್ಟು ಕಳುಹಿಸುವ ವೈದ್ಯರ ಬಗ್ಗೆ ಅನುಮಾನ.
ಫಾಲ್ಸ್ ಪ್ರೆಗ್ನೆನ್ಸಿ
ಗರ್ಭ ಧರಿಸದಿದ್ದರೂ ಕೆಲವೊಮ್ಮೆ ಅಂಥ ಅನುಭವವಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಅವಳಲ್ಲಿ ಬದಲಾವಣೆಗಳಾಗುತ್ತವೆ. ಬಸಿರಿನ ಎಲ್ಲ ಭಾವನೆಗಳೂ ಅವಳನ್ನು ತುಂಬಿಕೊಳ್ಳುತ್ತವೆ. ವಿಪರೀತ ಸುಸ್ತು ಅಂದೆನಿಸುವ ವಾಂತಿ ಬಸಿರಿನ ಖುಷಿ ನೀಡಬಹುದು. ಹೊಟ್ಟೆಯಲ್ಲಿ ಭ್ರೂಣ ಚಲಿಸಿದಂತಾಗಿ ಕರುಳಿನ ಕುಡಿಯ ಮೇಲೆ ಹಿಂದೆಂದೂ ಕಂಡುಕೇಳರಿಯದ ಮಮಕಾರ ಹುಟ್ಟಬಹುದು.
ಗರ್ಭ ಧರಿಸಿಲ್ಲ ಅಂದರೆ ವಾಂತಿ ಆಗಿದ್ದೇಕೆ? ಭ್ರೂಣ ಚಲಿಸಿದಂಥ ಅನುಭವವಾಗಿದ್ದು, ವಿಪರೀತ ಸುಸ್ತು....ಇದೆಲ್ಲದ್ದಕ್ಕೂ ಒಂದೇ ಉತ್ತರ ಅದು ಫಾಲ್ಸ್ ಪ್ರೆಗ್ನೆನ್ಸಿ ಅಥವಾ ಸುಳ್ಳು ಬಸಿರು.
ಅಪರೂಪಕ್ಕೆ ಮಹಿಳೆಯರಲ್ಲಿ ಇಂಥದ್ದೊಂದು ಭಾವನೆ ಕಾಡುವುದುಂಟು. ತುಂಬ ವರ್ಷದಿಂದ ಮಗುವಿನ ನಿರೀಕ್ಷೆಯಲ್ಲಿರುವವರಲ್ಲಿ, ಪದೇಪದೆ ಗರ್ಭಪಾತ, ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಲ್ಲಿ ಸುಳ್ಳು ಬಸಿರು ಕಂಡು ಬರುವ ಸಾಧ್ಯತೆ ಇರುತ್ತದೆ. ಪ್ರತಿ 22 ಸಾವಿರ ಗರ್ಭಿಣಿಯರಲ್ಲಿ 1ರಿಂದ 6 ಸುಳ್ಳು ಗರ್ಭಧಾರಣೆ ಪ್ರಕರಣ ಪತ್ತೆ ಹಚ್ಚಬಹುದು. ತೀರ ಸಣ್ಣ ವಯಸ್ಸಿನಲ್ಲಿ ಕಂಡು ಬರುವುದು ಕಮ್ಮಿಯೇ. ಸಾಮಾನ್ಯವಾಗಿ 30ರ ಆಸುಪಾಸಿನಲ್ಲಿ , ಮುಟ್ಟು ನಿಲ್ಲುವ ಅವಧಿಯಲ್ಲೂ ಇಂಥ ಭಾವನೆ ಕಾಡುವುದಿದೆ ಅಂತಾರೆ ತಜ್ಞರು.
ಲಕ್ಷಣ
ಸುಳ್ಳು ಅಂತ ನಂಬಲಿಕ್ಕೇ ಆಗುವುದಿಲ್ಲ. ಅಂಥ ಲಕ್ಷಣಗಳು ಮಹಿಳೆಯರನ್ನು ಕಾಡುತ್ತವೆ. ಮುಟ್ಟು ನಿಲ್ಲುತ್ತದೆ. ಹೊಟ್ಟೆ ಊದಿಕೊಳ್ಳುವುದು, ಸ್ತನದ ಗಾತ್ರದಲ್ಲಿ ಬದಲಾವಣೆ, ಭ್ರೂಣ ಚಲಿಸಿದಂಥ ಭಾವ, ವಾಕರಿಕೆ ಮತ್ತು ವಾಂತಿ, ತೂಕ ಹೆಚ್ಚಳವಾಗುತ್ತದೆ. ಈ ಲಕ್ಷಣ ಕೆಲವು ವಾರ ಅಥವಾ ಹಲವು ತಿಂಗಳು, ವರ್ಷಗಳವರೆಗೂ ಕಂಡು ಬರಬಹುದು.
ವೈದ್ಯರ ಬಳಿ ಹೋದಾಗ ಮೂತ್ರ ಪರೀಕ್ಷೆ ಅಥವಾ ಸ್ಕ್ಯಾನಿಂಗ್ನಲ್ಲಿ ವಾಸ್ತವ ಗೊತ್ತಾಗುತ್ತದೆ. ಇತ್ತೀಚೆಗೆ ಇಂತಹ ಪ್ರಕರಣಗಳು ಕಮ್ಮಿಯೇ. ಮುಟ್ಟು ನಿಂತ ಮೂರು ತಿಂಗಳೊಳಗೆ ಬಸಿರಿರಬಹುದು ಅನ್ನುವ ಕಾರಣ ಇಟ್ಟುಕೊಂಡು ವೈದ್ಯರನ್ನು ಸಂಪರ್ಕಿಸುವುದು ಮಾತ್ರ ಇವತ್ತಿಗೂ ಇದೆ. ಆದರೆ ಅದಕ್ಕಿಂತ ಹೆಚ್ಚು ಅಂದರೆ ಒಂಬತ್ತು ತಿಂಗಳವರೆಗೆ ಅದನ್ನೇ ನಂಬಿಕೊಳ್ಳುವ ಪ್ರಕರಣಗಳು ದಾಖಲಾಗುವುದಿಲ್ಲ.
ಕೆಲವರಿಗೆ ಮಾತ್ರ ಇಂತಹ ಅನುಭವವಾಗುತ್ತದೆ ಅಂದಾಕ್ಷಣ ನಿರ್ಲಕ್ಷಿಸುವ ಸಂಗತಿ ಅಲ್ಲ. ಮುಟ್ಟು ನಿಂತಾಕ್ಷಣ ಅದು ಗರ್ಭಧಾರಣೆ ಅಲ್ಲ. ಇದರ ಹಿಂದೆ ಇನ್ಯಾವುದೋ ರೋಗ ಅಡಗಿರಬಹುದು. ಬಸಿರಿರಬೇಕು ಅಂತೆಲ್ಲ ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿದರೆ ನಿಮ್ಮೊಳಗಿನ ಗೊಂದಲಕ್ಕೆ ತಕ್ಷಣ ಪರಿಹಾರ ಸಿಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮೊಳಗೆ ಏನೇನೊ ಕಲ್ಪಿಸಿಕೊಂಡು ಅನಂತರ ನಿರಾಸೆಗೊಳ್ಳಬೇಡಿ.
ಸುಳ್ಳು ಬಸಿರಿನ ಅನುಭವವನ್ನು ಸಿಡೊಸೈಸೀಸ್(ಛ್ಠಿಟ್ಚಛಿಜಿ)ಅಂತಾರೆ. ಇದು ಸಂಪೂರ್ಣ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆ. ಮಗುವಿನ ಅತಿಯಾದ ನಿರೀಕ್ಷೆ ಸುಳ್ಳೆಸುಳ್ಳು ಬಸಿರು ಅಂತ ಮನಸ್ಸನ್ನು ನಂಬಿಸುತ್ತದೆ. ಅದು ಮೆದುಳಿನ ಮೇಲೆ ಪ್ರಭಾವ ಬಿರುತ್ತದೆ. ಪರಿಣಾಮ ಹಾರ್ಮೋನ್ಗಳಲ್ಲಿ ಬದಲಾವಣೆ ಉಂಟಾಗುತ್ತವೆ. ದೈಹಿಕವಾಗಿಯೂ ಏರುಪೇರು ಉಂಟಾಗುತ್ತದೆ. ತಪಾಸಣೆ ಬಳಿಕವೂ ವೈದ್ಯರ ಮಾತಿನಲ್ಲಿ ನಂಬಿಕೆ ಬರದಿದ್ದರೆ ಅಂಥ ಸಂದರ್ಭಗಳಲ್ಲಿ ಕೌನ್ಸಲಿಂಗ್ ಸಾಕು, ಪರಿಣಾಮಕಾರಿಯಾಗದಿದ್ದಾಗ ಚಿಕಿತ್ಸೆ ನೀಡಬೇಕಾಗುತ್ತದೆ.
-ಡಾ. ಪ್ರಭಾ, ಮನಃಶಾಸ್ತ್ರಜ್ಞೆ, ನಿಮ್ಹಾನ್ಸ್ ಆಸ್ಪತ್ರೆ
ಹಾರ್ಮೋನ್ ಬದಲಾವಣೆಯಿಂದಾಗಿ ದೈಹಿಕವಾಗಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ಮುಟ್ಟು ನಿಲ್ಲುತ್ತದೆ. ಕೊಬ್ಬು ಸಂಗ್ರಹವಾಗಿ ಹೊಟ್ಟೆ ದಪ್ಪಗಾಗಬಹುದು. ಆ್ಯಸಿಡಿಟಿ ಸಮಸ್ಯೆ ಇರುವವರಲ್ಲಿ ಭ್ರೂಣ ಚಲಿಸಿದಂತಾಗುತ್ತದೆ. ವಾಂತಿ, ಊಟ ಸೇರದಿರುವ ಅನುಭವ ಕೂಡ ಆಗುತ್ತದೆ. ಆದರೆ ಗರ್ಭಕೋಶ ಹಿಗ್ಗುವುದಿಲ್ಲ. ವೈದ್ಯ ತಪಾಸಣೆ ನಂತರ ಅದು ಬಸಿರಲ್ಲ ಎಂದು ರೋಗಿಗೆ ಮನವರಿಕೆ ಆದಾಗ ಸಮಸ್ಯೆ ತಾನಾಗಿಯೇ ದೂರವಾಗುತ್ತದೆ.
- ಡಾ. ಶಕುಂತಲಾ, ಸ್ತ್ರೀರೋಗ ತಜ್ಞೆ, ವಾಣಿವಿಲಾಸ ಆಸ್ಪತ್ರೆ
Subscribe to:
Post Comments (Atom)
No comments:
Post a Comment